ದೇಶ

ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದ ನರೇಂದ್ರ ಗಿರಿ: ಆ ವಿಡಿಯೋದಲ್ಲೇನಿದೆ ಅಂದರೆ...

Srinivas Rao BV

ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷರಾಗಿದ್ದ ಮಹಾಂತ್ ನರೇಂದ್ರ ಗಿರಿ ಅವರು ಸಾವಿಗೂ ಕೆಲವೇ ಕ್ಷಣಗಳ ಮುನ್ನ ವಿಡಿಯೋ ಮಾಡಿ ಮಾತನಾಡಿರುವ ಸಂಗತಿ ಬೆಳಕಿಗೆ ಬಂದಿದೆ. 

ನರೇಂದ್ರ ಗಿರಿ ಅವರ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡ ನಂತರ ವಿಡಿಯೋವನ್ನು ಸಿಬಿಐ ವಶಕ್ಕೆ ಪಡೆದಿದೆ.

ಪತ್ರದಲ್ಲಿ ಬರೆದಿದ್ದ ಅಂಶಗಳನ್ನೇ ನರೇಂದ್ರ ಗಿರಿ ಅವರು ವಿಡಿಯೋದಲ್ಲಿಯೂ ಪುನರಾವರ್ತನೆ ಮಾಡಿದ್ದಾರೆ. 

2020 ರಲ್ಲಿ ಮಾಡಿದ ಕೊನೆಯ ವಿಲ್ ನ್ನು ಬದಲಾವಣೆ ಮಾಡುವಂತೆ ತಮ್ಮ ಮೇಲೆ ಒತ್ತಡವಿತ್ತು ಎಂಬ ಅಂಶವನ್ನು ನರೇಂದ್ರ ಗಿರಿ ವಿಡಿಯೋದಲ್ಲಿ ಬಹಿರಂಗಗೊಳಿಸಿದ್ದಾರೆ.

ವಿಚಾರಣೆ ವೇಳೆ ಎಸ್ಐಟಿ ಈ 2 ನಿಮಿಷಗಳ ವಿಡಿಯೋವನ್ನು ಪತ್ತೆ ಮಾಡಿದೆ. ವಿಡಿಯೋದಲ್ಲಿ ಆನಂದ ಗಿರಿ, ಆದ್ಯ ತಿವಾರಿ, ಸಂದೀಪ್ ತಿವಾರಿ ಎಂಬ ಮೂವರ ವಿರುದ್ಧ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಮಾಡಿದ್ದಾರೆ.

ಏನಿದು ಚಾರಿತ್ರ್ಯವಧೆ ಯತ್ನ?
ತಮ್ಮ ಸಾವಿಗೆ ಆನಂದಗಿರಿಯೇ ಕಾರಣ ಆತ ತಮ್ಮನ್ನು ಸಾವಿನ ಅಂಚಿಗೆ ದೂಡಿದ್ದಾನೆ ಎಂದು ನರೇಂದ್ರ ಗಿರಿ ಅವರು ಆರೋಪಿಸಿದ್ದು, ಆತನೊಂದಿಗೆ ಆದ್ಯ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ಕೂಡ ತಮ್ಮ ಸಾವಿಗೆ ಕಾರಣರಾಗಿದ್ದಾರೆ. ಈ ಮೂವರ ವಿರುದ್ಧವೂ ಆಡಳಿತ ಕ್ರಮ ಕೈಗೊಳ್ಳಬೇಕೆಂದು ನರೇಂದ್ರ ಗಿರಿ ಪತ್ರದಲ್ಲಿ ಆಗ್ರಹಿಸಿದ್ದಾರೆ.  

ಪತ್ರಿಕೆಗೆ ದೊರೆತಿರುವ ಪತ್ರದಲ್ಲಿ ಸಂನ್ಯಾಸಿ ನರೇಂದ್ರ ಗಿರಿ ಅವರು, "ನಾನು ಮಹಿಳೆಯರೊಂದಿಗೆ ಇರುವ ರೀತಿಯ ತಿರುಚಿದ ಚಿತ್ರಗಳನ್ನು ಹರಿಯ ಬಿಡಲು ಆನಂದಗಿರಿ ಯೋಜಿಸುತ್ತಿದ್ದ ಎಂಬ ಮಾಹಿತಿ ಹರಿದ್ವಾರದ ಮೂಲಕ ತಿಳಿಯಿತು" ಒಂದು ವೇಳೆ ಈ ರೀತಿಯಾದರೆ ಅಖಾಡ ಪರಿಷತ್ ನ ಮುಖ್ಯಸ್ಥರಾಗಿರುವ ತಮ್ಮ ಗೌರವ, ಘನತೆಗಳಿಗೆ ಚ್ಯುತಿ ಉಂಟಾಗಿ ಚಾರಿತ್ರ್ಯ ವಧೆಯಾಗಲಿದೆ. ಪ್ರಕರಣದ ಸತ್ಯಾಸತ್ಯತೆಗಳು ಆ ನಂತರ ಇತ್ಯರ್ಥವಾಗಬಹುದು ನಾನು ನಿರ್ದೋಷಿ ಎಂಬುದು ತಿಳಿಯುವ ವೇಳೆಗೆ ನನ್ನ ಚಾರಿತ್ರ್ಯಕ್ಕೆ ಸಂಪೂರ್ಣ ಕಳಂಕ ಅಂಟಿಕೊಂಡಿರುತ್ತದೆ. ನನ್ನ ಮನಸ್ಸು ಆನಂದ ಗಿರಿಯ ಕಾರಣದಿಂದಾಗಿ ತೊಂದರೆಗೊಳಗಾಗಿದೆ" ಎಂದು ವಿಡಿಯೋದಲ್ಲಿ ಮಹಾಂತ ನರೇಂದ್ರ ಗಿರಿ ಆರೋಪಿಸಿದ್ದಾರೆ.

ಸೆ.13 ರಂದೇ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದೆ. ಆದರೆ ಧೈರ್ಯ ಸಾಲಲಿಲ್ಲ. ಆದರೆ ಇಂದು ನನಗೆ ಸಿಕ್ಕ ಮಾಹಿತಿಯ ಪ್ರಕಾರ ಒಂದು ಅಥವಾ ಎರಡು ದಿನಗಳಲ್ಲಿ ಆನಂದ ಗಿರಿ ನಾನು ಮಹಿಳೆಯರೊಂದಿಗೆ ಇರುವ ತಿರುಚಿದ ಚಿತ್ರಗಳನ್ನು ಹರಿಯಬಿಡುವವನಿದ್ದ ಎಂಬ ಮಾಹಿತಿ ಸ್ಪಷ್ಟವಾಯಿತು. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ. 

SCROLL FOR NEXT