ದೇಶ

ಬಿಹಾರ: ದಾಖಲೆಯ 8ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್, ಡಿಸಿಎಂ ಆಗಿ ತೇಜಸ್ವಿ ಪ್ರಮಾಣ!

Srinivasamurthy VN

ಪಾಟ್ನಾ: ಬಿಜೆಪಿ ಸಖ್ಯ ಕಡಿದುಕೊಂಡು ಮೈತ್ರಿಸರ್ಕಾರದಿಂದ ಹೊರ ಬಂದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಆರ್ ಜೆಡಿ ಮೈತ್ರಿಯೊಂದಿಗೆ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಿತೀಶ್ ಕುಮಾರ್ ಅವರು ಇಂದು ಮಹಾಘಟಬಂಧನ್‌ ಸರ್ಕಾರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು, ನಿತೀಶ್​​ ಕುಮಾರ್ ಅವರಿಗೆ ಪಾಟ್ನಾದ ರಾಜಭವನದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

9 ಪಕ್ಷಗಳ ಮಹಾಘಟಬಂಧನ್
ನಿತೀಶ್ ಕುಮಾರ್ 9 ಪಕ್ಷಗಳ ಮಹಾಘಟಬಂಧನ್ ನಾಯಕರಾಗಿ ಆಯ್ಕೆಯಾಗಿದ್ದಾರೆ. RJD, ಕಾಂಗ್ರೆಸ್, JD(U), ಮತ್ತು CPI, CPIML ಮತ್ತು ಇತರರು ಸೇರಿದಂತೆ ಎಡ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದವು. ನಿನ್ನೆ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಬಳಿಕ ರಾಜ್ಯಪಾಲರಿಗೆ 164 ಶಾಸಕರ ಪಟ್ಟಿಯನ್ನು ಸಲ್ಲಿಸಿದ್ದರು. ಅದಾದ ಬಳಿಕ ಇಂದು ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ನಿತೀಶ್ ಕುಮಾರ್ ಅವರನ್ನು ಆಹ್ವಾನಿಸಿದ್ದರು.

ಬಿಜೆಪಿ ಮೈತ್ರಿಕೂಟದ ಸಿದ್ಧಸೂತ್ರ ಮುಂದುವರಿಕೆ
ಇಂದು ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಆಗಸ್ಟ್​ 15ರ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗಿದೆ. ಬಿಜೆಪಿಯೊಂದಿಗೆ ನಿತೀಶ್ ಕುಮಾರ್ ಹೊಂದಿದ್ದ ಸಚಿವ ಸಂಪುಟ ಹಂಚಿಕೆಯ ಸೂತ್ರವನ್ನೇ ಆರ್‌ಜೆಡಿ ಮತ್ತು ಜೆಡಿಯು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಹಣಕಾಸು, ರಸ್ತೆ ನಿರ್ಮಾಣ, ಪಟ್ಟಣ ಯೋಜನೆ, ಕೃಷಿ ಮತ್ತು ಭೂ ಕಂದಾಯ ಖಾತೆಗಳನ್ನು ನೀಡುವಂತೆ ಆರ್‌ಜೆಡಿ ಬೇಡಿಕೆ ಇಟ್ಟಿವೆ.

7 ಪಕ್ಷಗಳ ಮಹಾಘಟಬಂಧನ್ (ಮಹಾಮೈತ್ರಿಕೂಟ) ಹಾಗೂ ಒಬ್ಬ ಪಕ್ಷೇತರರು ನಮಗೆ ಬೆಂಬಲ ನೀಡಲಿದ್ದಾರೆ ಎಂದು ನಿತೀಶ್ ಕುಮಾರ್ ನಿನ್ನೆ ರಾಜ್ಯಪಾಲರೊಂದಿಗಿನ ಎರಡನೇ ಸಭೆಯ ನಂತರ ಹೇಳಿದ್ದರು. ಮೊದಲನೆಯ ಸಭೆಯಲ್ಲಿ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಜೆಡಿಯು ಮತ್ತು ಬಿಜೆಪಿ ಮೈತ್ರಿಗೆ ತಿಲಾಂಜಲಿ ಇಟ್ಟಿದ್ದರು. ಅದಾದ ಒಂದು ಗಂಟೆಯ ನಂತರ ಅವರು ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರೊಂದಿಗೆ ರಾಜ್ಯಪಾಲರ ಬಳಿಗೆ ತೆರಳಿ, ತಮ್ಮ ಒಟ್ಟು ಬಲದ ಆಧಾರದ ಮೇಲೆ ಮುಂದಿನ ಸರ್ಕಾರವನ್ನು ರಚಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದರು.
 

SCROLL FOR NEXT