ದೇಶ

ತಮಿಳುನಾಡು ವಿತ್ತ ಸಚಿವನ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು  

Srinivas Rao BV

ಮಧುರೈ: ಬಿಜೆಪಿ ಕಾರ್ಯಕರ್ತರು ತಮಿಳುನಾಡಿನ ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ. ಹುತಾತ್ಮ ಡಿ ಲಕ್ಷ್ಮಣನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ವಾಪಸ್ಸಾಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ. 

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಆ.11 ರಂದು ಹುತಾತ್ಮರಾಗಿದ್ದ ಯೋಧ ರೈಫಲ್ ಮೆನ್ ಲಕ್ಷ್ಮಣನ್ ಅವರ ಪಾರ್ಥಿವ ಶರೀರವನ್ನು ಪಡುಪಟ್ಟಿ ಗ್ರಾಮಕ್ಕೆ ತರಲಾಯಿತು. ಇದಕ್ಕೂ ಮುನ್ನ ಮಧುರೈ ವಿಮಾನ ನಿಲ್ದಾಣದಲ್ಲಿ ತ್ಯಾಗರಾಜನ್ ಅವರು ಅಂತಿಮ ನಮನ ಸಲ್ಲಿಸಿದರು. 

ವಿಮಾನ ನಿಲ್ದಾಣದ ಬಳಿ ರಾಜ್ಯಾಧ್ಯಕ್ಷ ಕೆ ಅಣ್ಣಾ ಮಲೈ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ಸೇರಿದ್ದರು. ಈ ವೇಳೆ ಕೆಲವು ಬದಲಾವಣೆಗಳ ಕಾರಣದಿಂದ ಬಿಜೆಪಿ ಕಾರ್ಯಕರ್ತರು ತ್ಯಾಗರಾಜನ್ ಅವರ ಬೆಂಗಾವಲುಪಡೆಯನ್ನು ತಡೆದಿದ್ದರು. ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು, ಈ ವೇಳೆ ಕಾರ್ಯಕರ್ತರ ಗುಂಪಿನಿಂದ ಚಪ್ಪಲಿ ಸಚಿವರ ಕಾರಿನತ್ತ ಬಂದು ಬಿದ್ದಿತು. ತಕ್ಷಣವೆ ಎಚ್ಚೆತ್ತ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಚದುರಿಸಿ ಸಚಿವರಿಗೆ ದಾರಿ ಸುಗಮಗೊಳಿಸಿದರು. 

ಕೃತ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ 6 ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

SCROLL FOR NEXT