ಶ್ರೀನಗರ: ಕಾಂಗ್ರೆಸ್ ಅಧ್ಯಕ್ಷ್ಯೆ ಸೋನಿಯಾ ಗಾಂಧಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರು. ಆದರೆ ಈ ನೇಮಕಾತಿಯನ್ನು ಒಪ್ಪಿಕೊಳ್ಳುವುದಕ್ಕೆ ಆಜಾದ್ ನಿರಾಕರಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪಕ್ಷದ ಸಂಪೂರ್ಣ ಸಂಘಟಾನ್ಮಕ ಬದಲಾವಣೆಗೆ ಸೋನಿಯಾ ಗಾಂಧಿ ಮುಂದಾಗಿದ್ದು, ಆಜಾದ್ ಅವರ ಆಪ್ತ ವಿಕಾರ್ ರಸೂಲ್ ವಾನಿ ಅವರನ್ನು ಪಕ್ಷದ ಪ್ರದೇಶ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.
ಕಾಂಗ್ರೆಸ್ ನಲ್ಲಿ ನಾಯಕತ್ವವನ್ನು ಪ್ರಶ್ನಿಸುತ್ತಿದ್ದ ಜಿ-23 ತಂಡದಲ್ಲಿ ಆಜಾದ್ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ ರಾಜ್ಯಸಭೆಯಿಂದ ನಿವೃತ್ತರಾಗಿದ್ದ ಆಜಾದ್ ಅವರು ರಾಜ್ಯಸಭೆಯ ವಿಪಕ್ಷ ನಾಯಕರೂ ಆಗಿದ್ದರು, ಅವರನ್ನು ಕಾಂಗ್ರೆಸ್ ಮರು ಆಯ್ಕೆ ಮಾಡಿರಲಿಲ್ಲ.
ಜಮ್ಮು-ಕಾಶ್ಮೀರದ ಕಾಂಗ್ರೆಸ್ ಪ್ರದೇಶ ಕಾರ್ಯಾಧ್ಯಕ್ಷರಾಗಿ ರಮಣ್ ಭಲ್ಲಾ, ಆಜಾದ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ, ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮಾಜಿ ನಾಯಕ ತಾರೀಕ್ ಹಮೀದ್ ಕರ್ರಾ ಅವರನ್ನು ನೇಮಕ ಮಾಡಲಾಗಿದೆ. ಆದರೆ ಆಜಾದ್ ಮಾತ್ರ ತನ್ನ ನೇಮಕಾತಿಯನ್ನು ಒಪ್ಪಿಕೊಂಡಿಲ್ಲ.