ದೇಶ

ಬಿಹಾರ ಸಂಪುಟ ಸಚಿವರಿಗೆ ಖಾತೆ ಹಂಚಿಕೆ: ಗೃಹ ಖಾತೆ ಉಳಿಸಿಕೊಂಡ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಗೆ ಆರೋಗ್ಯ, ರಸ್ತೆ

Lingaraj Badiger

ಪಾಟ್ನಾ: ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಹಾರದಲ್ಲಿ ಎರಡನೇ ಬಾರಿ 'ಮಹಾಘಟಬಂಧನ್' ಸರ್ಕಾರ ರಚನೆಯಾಗಿದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಮಂಗಳವಾರ ಅವರು ಸಂಪುಟಕ್ಕೆ 31 ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ, ಸಾಮಾನ್ಯ ಆಡಳಿತ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಚುನಾವಣೆ ಮತ್ತು "ಇತರರಿಗೆ ನೀಡದೆ ಇರುವ ಇತರ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಇನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು ಆರೋಗ್ಯ, ರಸ್ತೆ ನಿರ್ಮಾಣ, ನಗರ ವಸತಿ ಮತ್ತು ಅಭಿವೃದ್ಧಿ, ಗ್ರಾಮೀಣ ಕಾಮಗಾರಿಗಳಂತಹ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದಾರೆ.

ತೇಜಸ್ವಿ ಯಾದವ್ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಅವರಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ನೀಡಲಾಗಿದೆ.

ವಿಜಯ್ ಕುಮಾರ್ ಚೌಧರಿ ಅವರಿಗೆ ಹಣಕಾಸು, ವಾಣಿಜ್ಯ ತೆರಿಗೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ, ಬಿಜೇಂದ್ರ ಯಾದವ್ ಅವರಿಗೆ ವಿದ್ಯುತ್, ಯೋಜನೆ ಮತ್ತು ಅಭಿವೃದ್ಧಿ ಖಾತೆಗಳನ್ನು ಪಡೆದಿದ್ದಾರೆ.

ಇಂದು ಬೆಳಗ್ಗೆ ಪ್ರಮುಖ ಮಿತ್ರ ಪಕ್ಷವಾದ ಆರ್‌ಜೆಡಿಯ 16 ಶಾಸಕರು, ಜೆಡಿ(ಯು)ದಿಂದ 11, ಕಾಂಗ್ರೆಸ್‌ನಿಂದ ಇಬ್ಬರು, ಹಿಂದೂಸ್ತಾನಿ ಅವಾಮ್ ಮೋರ್ಚಾ(ಎಚ್‌ಎಎಂ) ಮತ್ತು ಒಬ್ಬ ಪಕ್ಷೇತರು ಸೇರಿದಂತೆ 31 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ನಿತೀಶ್ ಕುಮಾರ್ ಅವರ ನೂತನ ಸಂಪುಟದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಬಗ್ಗೆ ಕಾಳಜಿ ವಹಿಸಲಾಗಿದೆ.

SCROLL FOR NEXT