ನೋಯ್ಡಾ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಅವರ ಜಾಮೀನು ಅರ್ಜಿಯನ್ನು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಆದಾಗ್ಯೂ, ತ್ಯಾಗಿ ಅವರು ನೋಯ್ಡಾದಿಂದ ತಲೆಮರೆಸಿಕೊಂಡಿದ್ದ ವೇಳೆ ಅವರಿಗೆ ಆಶ್ರಯ ನೀಡಿದ ಆರೋಪ ಮೇಲೆ ಬಂಧನಕ್ಕೊಳಗಾಗಿದ್ದ ಅವರ ಇಬ್ಬರು ಸಹಾಯಕರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ ಎಂದು ವಕೀಲರು ತಿಳಿಸಿದ್ದಾರೆ.
ಇದನ್ನು ಓದಿ: ಮಹಿಳೆ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಜಾಮೀನು ಅರ್ಜಿ ತಿರಸ್ಕಾರ
ತ್ಯಾಗಿ ಅವರು ಆಗಸ್ಟ್ 5 ರಂದು ನೋಯ್ಡಾದಲ್ಲಿ ತಮ್ಮ ಹೌಸಿಂಗ್ ಸೊಸೈಟಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಮತ್ತು ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿದ್ದಾರೆ.
ಘಟನೆಯ ನಂತರ ನಾಲ್ಕು ದಿನಗಳ ಕಾಲ ತಲೆಮರೆಸಿಕೊಂಡಿದ್ದ ತ್ಯಾಗಿ ಅವರನ್ನು ಆಗಸ್ಟ್ 9 ರಂದು ಮೀರತ್ನಲ್ಲಿ ಬಂಧಿಸಲಾಗಿತ್ತು.
ತ್ಯಾಗಿ ಅವರು ಅಕ್ರಮವಾಗಿ ಉತ್ತರ ಪ್ರದೇಶ ಶಾಸಕರ ಸ್ಟಿಕ್ಕರ್ ಮತ್ತು ಸರ್ಕಾರಿ ಚಿಹ್ನೆಯನ್ನು ಹೊಂದಿರುವ ಕಾರುಗಳನ್ನು ಬಳಸುತ್ತಿರುವುದು ಕಂಡುಬಂದ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ಸೋಗು ಹಾಕುವ ಮೂಲಕ ವಂಚನೆ), 420 (ವಂಚನೆ) ಮತ್ತು 482 ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.