ದೇಶ

ಅಬಕಾರಿ ನೀತಿ ಪ್ರಕರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸ ಸೇರಿ 21 ಕಡೆಗಳಲ್ಲಿ ಸಿಬಿಐ ದಾಳಿ

Sumana Upadhyaya

ನವದೆಹಲಿ: ಹೊಸ ಅಕಾರಿ ನೀತಿ ಕೇಸಿನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಬೆಳ್ಳಂಬೆಳಗ್ಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 21 ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ (CBI) ದಾಳಿ ನಡೆಸಿದೆ. 

ಸಿಬಿಐ ಅಧಿಕಾರಿಗಳ ಹಲವು ತಂಡಗಳು ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ 21 ಕಡೆ ಏಕಕಾಲಕ್ಕೆ ದಾಳಿ ಆರಂಭಿಸಿದ್ದಾರೆ. ಹಿಂದಿನ ದೆಹಲಿಯ ಅಬಕಾರಿ ಇಲಾಖೆ ಆಯುಕ್ತ ಅರವ ಗೋಪಿಕೃಷ್ಣ ಅವರ ನಿವಾಸ ಮೇಲೆ ಕೂಡ ದಾಳಿ ನಡೆದಿದೆ. 

ತಮ್ಮ ನಿವಾಸ ಮೇಲಿನ ದಾಳಿ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಸಿಬಿಐ ಅಧಿಕಾರಿಗಳು ಇಲ್ಲಿ ನನ್ನ ಮನೆಯಲ್ಲಿದ್ದಾರೆ. ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತೇನೆ. ಅವರಿಗೆ ನನ್ನ ವಿರುದ್ಧ ಏನೂ ಸಾಕ್ಷಿಗಳು ಸಿಗುವುದಿಲ್ಲ ಎಂಬ ನಂಬಿಕೆ ನನಗಿದೆ. ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತಲೇ ಇರುತ್ತದೆ. ನಾವು ಪ್ರಾಮಾಣಿಕರು, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತೇವೆ. ದುರದೃಷ್ಟಕರ ಸಂಗತಿ ಎಂದರೆ ಈ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಶ ಇನ್ನೂ ನಂಬರ್ 1 ಆಗಿಲ್ಲ ಎಂದು ದೆಹಲಿಯ ಶಿಕ್ಷಣ ಕೂಡ ಆಗಿರುವ ಸಚಿವ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಶೀಘ್ರದಲ್ಲೇ ಸತ್ಯವನ್ನು ಹೊರಹಾಕಲು ಸಿಬಿಐ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ನಾವು ಸಿಬಿಐ ಅನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದುವರೆಗೂ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಯಾವುದಕ್ಕೂ ಸಾಕ್ಷಿ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

ಸಿಬಿಐ ಅಧಿಕಾರಿಗಳ ದಾಳಿ ಸ್ವಾಗತಿಸುತ್ತೇವೆ, ಅವರಿಗೆ ಏನೂ ಸಿಗುವುದಿಲ್ಲ: ದೆಹಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಡಿಸಿಎಂ ಮನೀಶ್ ಸಿಸೋಡಿಯಾ ಅವರ ಮನೆಯಲ್ಲಿ ಶೋಧ ನಡೆಸುತ್ತಿದೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಬಗ್ಗೆ ಟ್ವೀಟ್ ಮಾಡಿದ್ದು, ಅಮೆರಿಕದ ದೊಡ್ಡ ಸುದ್ದಿ ಪತ್ರಿಕೆ ದೆಹಲಿ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಹೊಗಳಿ ಬರೆದಿರುವ ದಿನ ಸಿಬಿಐ ದಾಳಿ ನಡೆದಿದೆ. ಅವರನ್ನು ಸ್ವಾಗತಿಸುತ್ತೇವೆ. ಇದೊಂದು ದುರಂತ ಎಂದಿದ್ದಾರೆ.

ಅಬಕಾರಿ ನೀತಿ 2021-22ರ ಜಾರಿಯಲ್ಲಿ ಗಂಭೀರ ಲೋಪದೋಷವಾಗಿದೆ ಎಂಬ ಆರೋಪ ಮೇಲೆ 11 ಮಂದಿ ಅಧಿಕಾರಿಗಳ ಅಮಾನತಿಗೆ ಇದಕ್ಕೂ ಮೊದಲು ಲೆಪ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನ ಅನುಮೋದನೆ ನೀಡಿದ್ದರು. ಅಮಾನತುಗೊಂಡ ಅಧಿಕಾರಿಗಳಲ್ಲಿ ಗೋಪಿಕೃಷ್ಣ ಮತ್ತು ಅಬಕಾರಿ ಇಲಾಖೆ ಉಪ ಆಯುಕ್ತ ಆನಂದ್ ಕುಮಾರ್ ತಿವಾರಿ ಕೂಡ ಇದ್ದಾರೆ.

ಎನ್ಐಎ ದಾಳಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಮ್ಮು ಮತ್ತು ಕಾಶ್ಮೀರದ 8 ವಿವಿಧ ಸ್ಥಳಗಳಲ್ಲಿ ಶೋಧ ನಡೆಸುತ್ತದೆ, ಎಲ್‌ಇಟಿಯ ಒಂದು ಶಾಖೆಯಾದ ಟಿಆರ್‌ಎಫ್‌ನ ಪ್ರಮುಖ ಮಾಡ್ಯೂಲ್‌ನಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಸ್ಫೋಟಕಗಳ ರವಾನೆಗೆ ಬಳಸಲಾದ ಡ್ರೋನ್‌ನ ಪ್ರತಿಬಂಧಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ದಾಳಿ ನಡೆಯುತ್ತಿದೆ.

SCROLL FOR NEXT