ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ "ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅವರ ಆಡಳಿತ ಮಾದರಿ" ಯಿಂದ ನರೇಂದ್ರ ಮೋದಿ ಸರ್ಕಾರಕ್ಕೆ ಭಯ ಶುರುವಾಗಿದೆ" ಎಂದು ಎಎಪಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲಿನ ಸಿಬಿಐ ದಾಳಿಗೆ ಶುಕ್ರವಾರ ತಿರುಗೇಟು ನೀಡಿದೆ.
ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು, ದೆಹಲಿಯ ಶಿಕ್ಷಣ ಸಚಿವರೂ ಆಗಿರುವ ಸಿಸೋಡಿಯಾ ಅವರ ಮನೆಯಲ್ಲಿ "ಪೆನ್ಸಿಲ್ಗಳು ಮತ್ತು ಜ್ಯಾಮೆಟ್ರಿ ಬಾಕ್ಸ್ಗಳನ್ನು" ಹೊರತುಪಡಿಸಿ ಸಿಬಿಐಗೆ ಏನೂ ಸಿಗುವುದಿಲ್ಲ ಎಂದಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿಯನ್ನು ಜೈಲಿಗಟ್ಟಲು ಬಿಜೆಪಿ ಯೋಜಿಸುತ್ತಿದೆ ಎಂದು ಆರೋಪಿಸಿದ ಅವರು, ಆಪ್ ನಾಯಕರ ವಿರುದ್ಧ 100ಕ್ಕೂ ಹೆಚ್ಚು ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಅವರು ಪ್ರತಿ ಬಾರಿ ನ್ಯಾಯಾಲಯದಲ್ಲಿ ಗೆದ್ದು ಬರುತ್ತಾರೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್, "ನಮ್ಮ ಕೆಲಸದಲ್ಲಿ ಅನೇಕ ಅಡೆತಡೆಗಳು ಸೃಷ್ಟಿಯಾಗುತ್ತಿವೆ. ಇದು ಸಿಸೋಡಿಯಾ ಮೇಲೆ ನಡೆದ ಮೊದಲ ದಾಳಿಯಲ್ಲ; ಈ ಹಿಂದೆಯೂ ದಾಳಿಗಳು ನಡೆದಿವೆ. ನಮ್ಮ ಅನೇಕ ಸಚಿವರು ಮತ್ತು ನನ್ನ ಮೇಲೆಯೂ ದಾಳಿಗಳು ನಡೆದಿವೆ. ಆದರೆ ಅವುಗಳಿಂದ ಏನೂ ಹೊರಬಂದಿಲ್ಲ. ಈ ಬಾರಿಯೂ ಏನೂ ಹೊರಬರುವುದಿಲ್ಲ ಎಂದಿದ್ದಾರೆ.
ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಸಿಸೋಡಿಯಾ ಅವರ ನಿವಾಸವನ್ನು ತಲುಪುತ್ತಿದ್ದಂತೆ, ಸಿಬಿಐಗೆ ಸ್ವಾಗತ. ಆದರೆ ಪಿತೂರಿಗಳು ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಮತ್ತು ಉತ್ತಮ ಶಿಕ್ಷಣವನ್ನು ನೀಡುವ ಕೆಲಸದಲ್ಲಿ ಮುಂದುವರಿಯುವ ನಮ್ಮ ಸಂಕಲ್ಪವನ್ನು ತಡೆಯುವುದಿಲ್ಲ ಎಂದು ದೆಹಲಿ ಡಿಸಿಎಂ ಟ್ವೀಟ್ ಮಾಡಿದ್ದರು.
ಇದನ್ನು ಓದಿ: ಅಬಕಾರಿ ನೀತಿ ಪ್ರಕರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸ ಸೇರಿ 21 ಕಡೆಗಳಲ್ಲಿ ಸಿಬಿಐ ದಾಳಿ
ಮತ್ತೊಂದೆಡೆ, ಬಿಜೆಪಿ ಸಹ ದೆಹಲಿ ಉಪಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಬಕಾರಿ ಖಾತೆಯನ್ನು ಹೊಂದಿರುವ ಸಿಸೋಡಿಯಾ ಅವರು "ಎಕ್ಸ್ಯೂಸ್ ಮಂತ್ರಿ" ಆಗಿದ್ದಾರೆ. "ಮದ್ಯ ಪರವಾನಗಿ ಮತ್ತು ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
ಕೇಜ್ರಿವಾಲ್ ಸರ್ಕಾರ ನೂರಾರು ಕೋಟಿ ರೂಪಾಯಿಗಳ ಮದ್ಯದ ಹಗರಣದಲ್ಲಿ ಭಾಗಿಯಾಗಿದೆ ಎಂದು ದೆಹಲಿ ಬಿಜೆಪಿ ಆರೋಪಿಸಿದೆ.