ಕರೀಂನಗರ: ಕೊತ್ತಪಲ್ಲಿ ಮಂಡಲದ ಸಂಗೆಂ ಜಂಕ್ಷನ್ನಲ್ಲಿ ಸ್ವಾತಂತ್ರ್ಯ ದಿನದಂದು ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಸಾಯಿಸಿ, ಬೈಕ್ಗೆ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದೊಯ್ದು ಪಟ್ಟಣದ ಹೊರವಲಯದಲ್ಲಿ ಎಸೆದಿದ್ದ ನಾಲ್ವರನ್ನು ಕೊತ್ತಪಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ಶುಕ್ರವಾರ ರಾತ್ರಿ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ಅವರಿಗೆ ದೂರವಾಣಿ ಕರೆ ಮಾಡಿ ಬೀದಿ ನಾಯಿಯನ್ನು ಕೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದಾದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ನಾಯಿಯನ್ನು ಕೊಂದಿರುವ ಬಗ್ಗೆ ಹೈದರಾಬಾದ್ ಮೂಲದ ಪ್ರಾಣಿ ಸಂರಕ್ಷಣಾ ಸಂಘಟನೆಯ ಪೃಥ್ವಿ ಪನ್ನೀರು ಅವರು ಕೊತ್ತಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಮನೇಕಾ ಗಾಂಧಿ ಅವರು ಪೊಲೀಸ್ ಕಮೀಷನರ್ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ ಕೇಸ್ ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ; ಶ್ವಾನದ ಅಂತ್ಯಕ್ರಿಯೆಯಲ್ಲಿ ನಟಿ!
ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿ. ಘಟನೆ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಕೊತ್ತಪಲ್ಲಿ ಪೊಲೀಸರಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದರು.
ಬಂಧಿತರನ್ನು ಎಂ.ಡಿ ಫಕ್ರುದ್ದೀನ್, ಎಂ.ಡಿ ಅಮೀರ್, ಎಂ.ಡಿ ಮುಕೀದ್ ಮತ್ತು ಎಂ.ಡಿ ಸಮೀರ್ ಎಂದು ಗುರುತಿಸಲಾಗಿದೆ.
ತನಿಖೆಯ ಭಾಗವಾಗಿ, ಪೊಲೀಸರು ಕೊತ್ತಪಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿಯಾದರು, ಈ ವೇಳೆ ಅವರು, ಪಟ್ಟಣದಲ್ಲಿ ಯಾವುದೇ ನಾಯಿಗೆ ರೇಬಿಸ್ ರೋಗ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೀದಿನಾಯಿಗಳು ಅಥವಾ ಸಾಕು ಪ್ರಾಣಿಗಳಿಂದ ಸಮಸ್ಯೆ ಎದುರಾದರೆ, ನಾಗರಿಕ ಸಂಸ್ಥೆಯನ್ನು ಸಂಪರ್ಕಿಸಬೇಕು. ಪ್ರಾಣಿಗಳ ಹತ್ಯೆ ಕಾನೂನು ಉಲ್ಲಂಘನೆಯಾಗಿದೆ. ಪ್ರಾಣಿಗಳ ಮೇಲೆ ಕ್ರೌರ್ಯ ತೋರುವ ಬದಲು ವಾತ್ಸಲ್ಯ ತೋರಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.