ಬೆಳಗಾವಿ: ಗಡಿ ವಿವಾದದ ಪ್ರಕರಣವು ಯಾವುದೇ ಸಮಯದಲ್ಲಿ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬರುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಇಚಲಕರಂಜಿಯ ಸಂಸದ ಧೈರ್ಯಶೀಲ ಮಾನೆ ಅವರನ್ನು ಮಹಾರಾಷ್ಟ್ರ ಗಡಿ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಬುಧವಾರ ನೇಮಕ ಮಾಡಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಇಚಲಕರಂಜಿ ಸಂಸದ ಧೈರ್ಯಶೀಲ ಮಾನೆ ಅವರನ್ನು ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಗಡಿ ವಿವಾದ: ರಾಜ್ಯದ ನಿಲುವು ಸ್ಪಷ್ಟವಾಗಿದ್ದು, ನಮ್ಮ ನಿಲುವು ಸಾಂವಿಧಾನಿಕ-ಕಾನೂನು ಬದ್ಧವಾಗಿದೆ; ಸಿಎಂ ಬೊಮ್ಮಾಯಿ
ನಂತರ ಮಾನೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮುಂಬೈನ ತಮ್ಮ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಈ ಹಿಂದೆ ಹಲವು ವರ್ಷಗಳ ಕಾಲ ದಿ.ಎನ್.ಡಿ. ಪಾಟೀಲ ಗಡಿ ಸಲಹಾ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ಜಯಂತ್ ಪಾಟೀಲ್ ಅವರನ್ನು ನೇಮಿಸಲಾಯಿತು. ಠಾಕ್ರೆ ಸರ್ಕಾರ ಪತನವಾದಾಗಿನಿಂದ ಈ ಸ್ಥಾನ ತೆರವಾಗಿತ್ತು. ಇದೀಗ ಈ ಸ್ಥಾನಕ್ಕೆ ಧೈರ್ಯಶೀಲ ಮಾನೆ ಅವರನ್ನು ಮಹಾರಾಷ್ಟ್ರ ನೂತನ ಸರ್ಕಾರ ನೇಮಿಸಿದೆ.