ದೇಶ

ಅಭಿವೃದ್ಧಿ ವಿಚಾರದಲ್ಲಿ ದೇಶದ ಜನರ ಮೊದಲ ಆಯ್ಕೆ ಬಿಜೆಪಿ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಒಟ್ಟು 182 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಇಲ್ಲಿ ಮೋದಿ-ಅಮಿತ್ ಶಾ ಮ್ಯಾಜಿಕ್ ವರ್ಕ್ ಆಗಿದೆ. ಸತತ ಏಳನೇ ಬಾರಿ ಕೇಸರಿ ಪಕ್ಷ ಅಧಿಕಾರದ ಗದ್ದುಗೆ ಏರುತ್ತಿದೆ.

ಈ ಗೆಲುವಿನ ಹುಮ್ಮಸ್ಸಿನಲ್ಲಿ ನಿನ್ನೆ ಸಾಯಂಕಾಲ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಗುರಿಯಾಗಿದೆ ಎಂದಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನೋಡಲು ಸಾಮಾನ್ಯ ಜನರು ಹಂಬಲಿಸುತ್ತಾರೆ ಎಂಬುದನ್ನು ಗುಜರಾತ್ ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ ಎಂದು ಹೇಳಿದರು.

ಭಾರತವನ್ನು ಮೊದಲು ಮುಂದಿಡಿ, ದೋಷಗಳನ್ನು ಕೆಡವಿ, 2024 ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಿ ಎಂದು ಒತ್ತಿ ಹೇಳಿದರು, ಯುವಕರು ವಿಭಜಕ ರಾಜಕೀಯವನ್ನು ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದರು. ಜನರು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ಬಯಸಿದಾಗ, ಬಿಜೆಪಿ ಅವರ ಮೊದಲ ಆಯ್ಕೆಯಾಗಿದೆ ಎಂದರು. ಗುಜರಾತ್ ಫಲಿತಾಂಶದಿಂದ ಸ್ಪಷ್ಟ ಸಂದೇಶವಿದೆ, ಮುಂದಿನ 25 ವರ್ಷಗಳವರೆಗೆ ಅಭಿವೃದ್ಧಿಯ ರಾಜಕೀಯ ಮಾತ್ರ ಮುಂದುವರಿಯುತ್ತದೆ, ಬೇರೇನೂ ಇಲ್ಲ ಎಂದರು. 

ಹಿಮಾಚಲ ಪ್ರದೇಶ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಬಿಜೆಪಿಯು ರಾಜ್ಯದಲ್ಲಿ ಅಭಿವೃದ್ಧಿಯನ್ನು ಬಯಸುತ್ತದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆಯಾದರೂ, ಗುಡ್ಡಗಾಡು ರಾಜ್ಯಕ್ಕೆ ಕೇಂದ್ರ ಸರ್ಕಾರವು ಬೆಂಬಲವನ್ನು ಮುಂದುವರಿಸುತ್ತದೆ ಎಂದು ಹೇಳಿದರು.

SCROLL FOR NEXT