ದೇಶ

ಮಾಂಡೌಸ್ ಚಂಡಮಾರುತದ ಅಬ್ಬರ: ಮರೀನಾ ಬೀಚ್ ನಲ್ಲಿನ 'ವಿಶೇಷ ಚೇತನರ ಸೇತುವೆ' ಧ್ವಂಸ

Vishwanath S

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ 'ಮಾಂಡೌಸ್' ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದಿಂದಾಗಿ ಚೆನ್ನೈನ ಮರೀನಾ ಬೀಚ್ ನಲ್ಲಿ ವಿಶೇಷ ಚೇತನರಿಗಾಗಿ ನಿರ್ಮಾಣ ಮಾಡಿದ್ದ ನಡಿಗೆ ಸೇತುವ ಧ್ವಂಸಗೊಂಡಿದೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ವಿಕಲಚೇತನರು ಸಮುದ್ರದ ಅಲೆಗಳನ್ನು ವೀಕ್ಷಿಸಲು ಈ ವಿಶಿಷ್ಠ ಸೇತುವೆ ನಿರ್ಮಿಸಲಾಗಿತ್ತು. ನವೆಂಬರ್ 27ರಂದು ಇದು ಲೋಕಾರ್ಪಣೆಯಾಗಿ ಸಾಕಷ್ಟು ಪ್ರವಾಸಿಗರನ್ನು ಸೆಳೆದಿತ್ತು. 

ಶಾಶ್ವತ ಮರದ ಬೋರ್ಡ್‌ವಾಕ್ ಅನ್ನು ಶಾಸಕ ಉದಯನಿಧಿ ಸ್ಟಾಲಿನ್ ಅವರು ಉದ್ಘಾಟಿಸಿದ್ದರು. ಭಾರತದಲ್ಲಿ ಮೊದಲ ಬಾರಿಗೆ, ವಿಕಲಚೇತನರು ಸಮುದ್ರದ ಬಳಿ ಹೋಗಲು ಅನುವು ಮಾಡಿಕೊಡಲು ತಮಿಳುನಾಡಿನಲ್ಲಿ ಈ ರೀತಿಯ ಮರದ ನಡಿಗೆ ಸೇತುವೆಯನ್ನು ನಿರ್ಮಿಸಲಾಗಿತ್ತು. 

ಸರ್ಕಾರವು ಅಭಿವೃದ್ಧಿಪಡಿಸಿದ ಈ ನಡಿಗೆ ಸೇತುವೆಯು 263 ಮೀಟರ್ ಉದ್ದ, 3 ಮೀಟರ್ ಅಗಲ ಮತ್ತು ಮರಳಿನ ಮೇಲ್ಮೈಯಿಂದ ಒಂದು ಮೀ ಎತ್ತರದಲ್ಲಿ ನಿರ್ಮಾಣವಾಗಿತ್ತು. 

ಸೇತುವೆ ನಿರ್ಮಾಣಕ್ಕೆ ಅಂದಾಜು ರೂ.1.14 ಕೋಟಿ ವೆಚ್ಚವಾಗಿತ್ತು. ಗಾಲಿಕುರ್ಚಿ ಬಳಸುವವರು ಈ ಕಾಲುದಾರಿಯ ಮೂಲಕ ನಡೆದು ಸಮುದ್ರದ ಸೌಂದರ್ಯವನ್ನು ಸವಿಯಬಹುದಿತ್ತು. ಆದರೆ ಮಾಂಡೌಸ್ ಚಂಡಮಾರುತದಿಂದಾಗಿ ಸೃಷ್ಟಿಯಾಗಿರುವ ಬೃಹತ್ ಸಮುದ್ರದ ಅಲೆಗಳ ಅಬ್ಬರಕ್ಕೆ ವಿಶೇಷ ಸೇತುವೆ ಹಾಳಾಗಿದೆ.

ಈ ವೇಳೆ ಚೆನ್ನೈ ಕಾರ್ಪೋರೇಷನ್ ಮೇಯರ್ ಪ್ರಿಯಾ ಅವರು ಮಾಂಡೌಸ್ ಚಂಡಮಾರುತದಿಂದ ಹಾನಿಗೀಡಾದ ಅಂಗವಿಕಲರ ವಿಶೇಷ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಲಾಗುವುದು ಮತ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT