ವಿಜಯವಾಡ: ಮಾಂಡೌಸ್ ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಆಂಧ್ರಪ್ರದೇಶ ಸರ್ಕಾರ ತಲಾ 2,000 ರೂಪಾಯಿಗಳವರೆಗೆ ಆರ್ಥಿಕ ನೆರವು ಬಿಡುಗಡೆ ಮಾಡಿದೆ. ಕುಟುಂಬಗಳು ಪುನರ್ವಸತಿ ಕೇಂದ್ರದಿಂದ ತಮ್ಮ ಮನೆಗೆ ಮರಳುವಾಗ ಈ ಹಣವನ್ನು ಪಾವತಿಸಲಾಗುವುದು ಎನ್ನಲಾಗಿದೆ.
ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳ ಆರಂಭದ ಹೊರತಾಗಿಯೂ, ನಿರಾಶ್ರಿತರಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಮಾಡುವಂತೆ ಮುಖ್ಯಮಂತ್ರಿ ಜಗನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರ್ಥಿಕ ನೆರವು ಬಿಡುಗಡೆ ಕುರಿತು ಭಾನುವಾರ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ.
ನೆಲ್ಲೂರು, ತಿರುಪತಿ,ಚಿತ್ತೂರು, ಅನ್ನಮಯ್ಯ ಮತ್ತು ವೈಎಸ್ಆರ್ ಕಡಪ ಜಿಲ್ಲೆಗಳ ಸಂತ್ರಸ್ತರಿಗೆ ಆರ್ಥಿಕ ನೆರವಿನ ಹಣವನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ‘ಮಾಂಡೂಸ್’ ಚಂಡಮಾರುತ: ಆಂಧ್ರ ಪ್ರದೇಶದ 6 ಜಿಲ್ಲೆಗಳಲ್ಲಿ ಭಾರಿ ಮಳೆ, ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಮುಖ್ಯ ಕಾರ್ಯದರ್ಶಿ ಜವಾಹರ್ ರೆಡ್ಡಿ ನೇತೃತ್ವದ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ರಕ್ಷಣಾ ಮತ್ತು ಪುನರ್ವಸತಿ ಸೇವೆಗಳಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.