ದೇಶ

ಶಾಲೆ-ಕಾಲೇಜುಗಳಲ್ಲಿ ಹಣಕಾಸು ನಿರ್ವಹಣೆ, ಆರ್ಥಿಕ ಸಾಕ್ಷರತೆ ಶಿಕ್ಷಣದ ಭಾಗವಾಗಬೇಕು- ಸಂಸತ್ತಿನಲ್ಲಿ ತೇಜಸ್ವಿ ಸೂರ್ಯ

Nagaraja AB

ನವದೆಹಲಿ: ಶಾಲೆ ಮತ್ತು ಕಾಲೇಜುಗಳಲ್ಲಿ ಹಣಕಾಸು ನಿರ್ವಹಣೆ, ಅರ್ಥಿಕ ಸಾಕ್ಷರತೆ ವಿಷಯಗಳಿಗೆ ಒತ್ತು ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದ ಯುವ ಜನತೆಯ  ಭವಿಷ್ಯದ ಆರ್ಥಿಕ ಸುರಕ್ಷತೆಗೆ  ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ದೇಶದ ಯುವ ಜನತೆ  ಔದ್ಯೋಗಿಕ ರಂಗದಲ್ಲಿ ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅರ್ಥಿಕ ಸಾಕ್ಷರತೆಯು ಅವರಲ್ಲಿ ಭವಿಷ್ಯದ ಹಣಕಾಸು ನಿರ್ವಹಣೆಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಸಾಲದ ಸುಳಿ, ನಕಲಿ,ಹಣಕಾಸು ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದರು.

ಪ್ರಸ್ತುತ ಯುವ ನೌಕರರು ತಮ್ಮ ಭವಿಷ್ಯದ, ನಿವೃತ್ತಿ ನಂತರದ ಜೀವನಕ್ಕೆ ಮ್ಯೂಚುವಲ್ ಫಂಡ್ಸ್, ಹೂಡಿಕೆ, ಬ್ಯಾಂಕಿಂಗ್ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು. 

ಸಾಮಾನ್ಯ ಹಣಕಾಸು ನಿರ್ವಹಣೆಯ ಜ್ಞಾನ, ಹಣದ ಮಹತ್ವ, ಉಳಿತಾಯ, ವಿಮೆ, ನಿವೃತ್ತಿ ನಂತರದ ಜೀವನ ನಿರ್ವಹಣೆ ಕುರಿತಾಗಿ ಸಮರ್ಪಕ ಮಾಹಿತಿಯ ಕೊರತೆಯಿಂದ ಹೆಚ್ಚಿನ ಸಂಖ್ಯೆಯ ಯುವ ಜನತೆ,  ನಕಲಿ, ವಂಚನೆಗೆ ಒಳಗಾಗುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ ಎಂದರು. 

ಹೀಗಾಗಿ ಆರ್ಥಿಕ ಸಾಕ್ಷರತೆ, ಹಣಕಾಸು ನಿರ್ವಹಣೆ ಬಗೆಗಿನ ಜ್ಞಾನ  ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗಲಿದ್ದು, ಶಾಲೆ- ಕಾಲೇಜುಗಳಲ್ಲಿ  ಅರ್ಥಿಕ ಸಾಕ್ಷರತೆಯನ್ನು ಶೈಕ್ಷಣಿಕ ಭಾಗವಹಿಸುವಂತೆ ಸಂಸದರು ಒತ್ತಾಯಿಸಿದರು. 

SCROLL FOR NEXT