ನವದೆಹಲಿ: 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬರಿಗೆ 17 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಅಪರಾಧಿ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ಕಳೆದ 17 ವರ್ಷಗಳಿಂದ ಜೈಲಿನಲ್ಲಿರುವುದನ್ನು ಪರಿಗಣಿಸಿ ಜಾಮೀನು ನೀಡಿದ್ದಾರೆ.
ಅಪರಾಧಿಗಳಲ್ಲಿ ಒಬ್ಬರಾದ ಫಾರೂಕ್ ಪರ ವಾದ ಮಂಡಿಸಿದ ವಕೀಲರು, ಅಪರಾಧಿ ಇಷ್ಟು ವರ್ಷ ಜೈಲುವಾಸದಲ್ಲಿ ಕಳೆದಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿ: ಬಿಲ್ಕಿಸ್ ಬಾನೊ ಕೇಸ್: ಆರೋಪಿಗಳ ಬಿಡುಗಡೆ ವಿರುದ್ಧದ ಅರ್ಜಿ, ವಿಚಾರಣೆಯಿಂದ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ
ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರನ್ನು ಸಜೀವ ದಹನ ಮಾಡಿದ ಅಪರಾಧ "ಅತ್ಯಂತ ಹೇಯ" ಎಂದು ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು.
ಸಬರಮತಿ ಎಕ್ಸ್ಪ್ರೆಸ್ನ ಕೋಚ್ಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಫಾರೂಕ್ ಮತ್ತು ಇತರ ಹಲವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ನ ಎಸ್ -6 ಕೋಚ್ಗೆ ಬೆಂಕಿ ಹಚ್ಚಿದ್ದರಿಂದ 59 ಜನರು ಸಾವನ್ನಪ್ಪಿದ್ದರು. ಇದು ರಾಜ್ಯದಲ್ಲಿ ಭಾರಿ ಗಲಭೆಗೆ ಕಾರಣವಾಗಿತ್ತು. ಈ ಪ್ರಕರಣದ ಹಲವಾರು ಅಪರಾಧಿಗಳು ತಮಗೆ ನೀಡಲಾದ ಶಿಕ್ಷೆಯ ವಿರುದ್ಧ ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ.