ದೇಶ

ಸೋಶಿಯಲ್ ಮೀಡಿಯಾ ಫೋಸ್ಟ್ ಗಳಿಗೆ ಬೆದರಿಕೆ: ಭಜರಂಗ ದಳದಿಂದ ಶೀಘ್ರ ಸಹಾಯವಾಣಿ ಸ್ಥಾಪನೆ

Nagaraja AB

ನವದೆಹಲಿ: ಸೋಶಿಯಲ್ ಮೀಡಿಯಾಗಳಲ್ಲಿ ಹಾಕಲಾದ ಫೋಸ್ಟ್ ಕುರಿತು ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆ ಬರುವವರಿಗಾಗಿ ಭಜರಂಗದಳ ಯುವ ಘಟಕ ಶೀಘ್ರದಲ್ಲಿಯೇ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಬುಧವಾರ ಹೇಳಿದೆ.

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿ ಉಮೇಶ್ ಕೊಲ್ಹೆ ಬರ್ಬರ ಹತ್ಯೆಯಾದಾಗಿನಿಂದಲೂ ದೇಶದಲ್ಲಿ ಉಗ್ರರ ವಾತಾವರಣ ನಿರ್ಮಾಣದ ಪ್ರಯತ್ನ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಫೋಸ್ಟ್ ಹಾಕಿದ್ದ ಜನರಿಗೆ ಬೆದರಿಕೆ ಬರುತ್ತಿದೆ ಎಂದು ವಿಹೆಚ್ ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ವಿಡಿಯೋ ಸಂದೇಶದಲ್ಲಿ ಆರೋಪಿಸಿದ್ದಾರೆ.

ಇಸ್ಲಾಮಿಕ್ ಮೂಲಭೂತವಾದದಿಂದ ಇಡೀ ವಿಶ್ವವೇ ಬೇಸತ್ತಿದೆ. ಆದರೆ, ಕಳೆದ ಕೆಲವು ದಿನಗಳಲ್ಲಿ ಅವರ ವಿಷವನ್ನು ವೇಗವಾಗಿ ಹರಡಲಾಗುತ್ತಿದೆ. ಉಮೇಶ್ ಕೊಲ್ಹೆ ಮತ್ತು ಕನ್ಹಯ್ಯಾ ಲಾಲ್  ಕೊಲೆಯಾದ ರೀತಿಗೆ ಇಡೀ ವಿಶ್ವವೇ ಆಘಾತ ವ್ಯಕ್ತಪಡಿಸಿದೆ. ಈ ಎರಡು ಘಟನೆ ನಂತರ ಹಿಂಸೆಯನ್ನು ಹೆಚ್ಚಿಸಲು, ದೇಶದಲ್ಲಿ ಉಗ್ರರ ವಾತಾವರಣ ಸೃಷ್ಟಿಗೆ ಪ್ರಯತ್ನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. 

ಸೋಶಿಯಲ್ ಮೀಡಿಯಾಗಳಲ್ಲಿ ಹಾಕಲಾದ ಫೋಸ್ಟ್ ಇಷ್ಟವಾಗದಿದ್ದಲ್ಲಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಹಿಂದೂ ಸಮಾಜ ಇದನ್ನು ಸಹಿಸಿಕೊಳ್ಳುವುದಿಲ್ಲ. ಇಂತಹ ಬೆದರಿಕೆಗಳು ಬಂದಾಗ ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ವಿಶ್ವ ಹಿಂದೂ ಪರಿಷತ್ ಪರವಾಗಿ ಹಿಂದೂ ಸಮುದಾಯದ ಜನರಲ್ಲಿ ಮನವಿ ಮಾಡುವುದಾಗಿ ಜೈನ್ ಹೇಳಿದ್ದಾರೆ.

ಒಂದು ವೇಳೆ ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ಭಜರಂಗ ದಳ ಯುವ ಘಟಕ ಸಹಾಯ ಮಾಡಲು ಯಾವಾಗಲೂ ಸಿದ್ಧವಿದೆ. ಸಹಾಯವಾಣಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT