ನವದೆಹಲಿ: ತಮ್ಮ ರಾಜ್ಯಸಭೆ ಸದಸ್ಯತ್ವದ ಅವಧಿ ಗುರುವಾರ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಮ್ ಚಂದ್ರ ಪ್ರಸಾದ್ ಸಿಂಗ್ (ಆರ್ಸಿಪಿ ಸಿಂಗ್) ಅವರು ಬುಧವಾರ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಆರ್ ಸಿಪಿ ಸಿಂಗ್ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರೂ ಕೇಂದ್ರ ಸಚಿವರ ರಾಜ್ಯಸಭೆ ಅವಧಿ ಗುರುವಾರ ಅಂತ್ಯಗೊಳ್ಳುತ್ತಿದೆ. ಇದರ ನಂತರ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಹೊಂದಿರುವುದಿಲ್ಲ. ಹೀಗಾಗಿ ಅವರಿಬ್ಬರೂ ರಾಜೀನಾಮೆ ನೀಡಿದ್ದಾರೆ.
ಬಿಹಾರದ ಆರ್ಸಿಪಿ ಸಿಂಗ್ ಅವರನ್ನು ಮೇಲ್ಮನೆಗೆ ಪುನರಾಯ್ಕೆ ಮಾಡಲು ನಿತೀಶ್ ಕುಮಾರ್ ಅವರ ಜೆಡಿಯು ನಿರಾಕರಿಸಿತ್ತು. ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಆರ್ಸಿಪಿ ಸಿಂಗ್ ಅವರನ್ನು ಪಕ್ಷದ ಕೋಟಾದಿಂದ ಎನ್ಡಿಎ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ್ದರೂ, ಅವರಿಗೆ ಮೇಲ್ಮನೆ ಟಿಕೆಟ್ ನೀಡದೆ ಇದ್ದದ್ದು ಅಚ್ಚರಿ ಮೂಡಿಸಿತ್ತು. ಉಕ್ಕು ಖಾತೆ ಸಚಿವರಾಗಿದ್ದ ಸಿಂಗ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.