ಚೆನ್ನೈ: ಕಾಳಿ ದೇವಿಯನ್ನು ಕೆಟ್ಟದಾಗಿ ಚಿತ್ರಿಸಿ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿರುವ ‘ಕಾಳಿ’ ಸಾಕ್ಷ್ಯಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರಿಗೆ ಬೆದರಿಕೆ ಹಾಕಿದ ಹಿಂದೂ ಕಾರ್ಯಕರ್ತೆ ‘ಅತಿರಾಧಿ’ ಸರಸ್ವತಿ ಅವರನ್ನು ಕೊಯಮತ್ತೂರಿನ ಸೆಲ್ವಪುರಂ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಮಹಿಳೆ 'ಅತಿರಾಧಿ' ಸರಸ್ವತಿ ಅವರು ಷಷ್ಠಿ ಸೇನಾ ಹಿಂದೂ ಮಕ್ಕಳ್ ಇಯಕಂ ಸದಸ್ಯೆಯಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ಬಿ (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು 506(1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಇದನ್ನು ಓದಿ: ತೀವ್ರ ವಿರೋಧದ ನಂತರ ವಿವಾದಾತ್ಮಕ 'ಕಾಳಿ' ಸಾಕ್ಷ್ಯಚಿತ್ರದ ಪ್ರಸ್ತುತಿ ತೆಗೆದುಹಾಕಿದ ಅಗಾ ಖಾನ್ ಮ್ಯೂಸಿಯಂ
ಲೀನಾ ಮಣಿಮೇಕಲೈ ಅವರಿಗೆ ಸರಸ್ವತಿ ಅವರು ಬೆದರಿಕೆ ಹಾಕುತ್ತಿರುವ ವಿಡಿಯೋವೊಂದು ಸೆಲ್ವಪುರಂ ಸಬ್ ಇನ್ಸ್ಪೆಕ್ಟರ್ ಸೆಲ್ವಕುಮಾರ್ ಅವರಿಗೆ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ವಿಡಿಯೋ ಮಂಗಳವಾರದಿಂದ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೊಲೀಸರು ಮಹಿಳೆಯನ್ನು ತಿರುಪ್ಪೂರ್ ಜಿಲ್ಲೆಯ ಸ್ಥಳದಿಂದ ಪತ್ತೆ ಹಚ್ಚಿ ಬುಧವಾರ ತಡರಾತ್ರಿ ಬಂಧಿಸಿದ್ದಾರೆ.