ಲಖನೌ: ಉತ್ತರ ಪ್ರದೇಶದ ಲಖನೌ ನಲ್ಲಿ ಹೊಸದಾಗಿ ಉದ್ಘಾಟನೆಗೊಂಡಿದ್ದ ಲುಲು ಮಾಲ್ ಒಳಗಡೆ ಅನಧೀಕೃತ ರೀತಿಯಲ್ಲಿ ನಮಾಜ್ ಮಾಡಿದ ಆರೋಪದ ಮೇರೆಗೆ ನಾಲ್ವರನ್ನು ಮಂಗಳವಾರ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳು ಮಾಲ್ ನ ಸಿಬ್ಬಂದಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಲ್ಲಾ ಆರೋಪಿಗಳು ಲಖನೌ ನಿವಾಸಿಗಳಾಗಿದ್ದಾರೆ ಎಂದು ಲಖನೌ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇತರ ನಾಲ್ವರು ಆರೋಪಿಗಳ ಹುಡುಕಾಟ ಕಾರ್ಯ ಸಾಗಿದೆ ಎಂದು ಅವರು ಹೇಳಿದ್ದಾರೆ. ಇಂತಹ ವಾತಾವರಣ ಹದಗೆಡಿಸುವ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಈ ಮಧ್ಯೆ ಮಾಲ್ ನಲ್ಲಿನ ಶೇ. 80 ರಷ್ಟು ಸಿಬ್ಬಂದಿ ಹಿಂದೂಗಳಾಗಿದ್ದಾರೆ ಎಂದು ಮಾಲ್ ನ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ಮಾಲ್ ನಲ್ಲಿ ನಮಾಜ್ ಗೆ ಆಕ್ಷೇಪವೆತ್ತಿದ್ದ ಹಿಂದೂ ಸಂಘಟನೆಗಳು, ಅಲ್ಲಿ ಹನುಮಾನ್ ಚಾಲಿಸಾ ನಡೆಸಲು ಅನುಮತಿ ಕೋರಿದ ನಂತರ ಈ ಘಟನೆ ವಿವಾದವಾಗಿ ರೂಪುಗೊಂಡಿತ್ತು.