ದೇಶ

ಕೇರಳ: ಬಿಎಂಡಬ್ಲ್ಯೂ- ಥಾರ್ ವಾಹನಗಳ ಮಧ್ಯೆ ರೇಸ್ ಅಪಘಾತದಲ್ಲಿ ಅಂತ್ಯ; ಅಮಾಯಕ ವೃದ್ಧ ಬಲಿ

Srinivasamurthy VN

ತ್ರಿಶೂರ್: ಮಹಿಂದ್ರಾ ಥಾರ್ ಮತ್ತು ಬಿಎಂಡಬ್ಲ್ಯೂ ಕಾರುಗಳ ನಡುವಿನ ರಸ್ತೆ ರೇಸ್ ವೇಳೆ ಅಪಘಾತ ಸಂಭವಿಸಿದ್ದು, ಥಾರ್ ಕಾರು ರಸ್ತೆ ಬದಿಯ ವ್ಯಕ್ತಿಯೊಬ್ಬರಿಗೆ ಢಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯ ಕೇರಳದ ತ್ರಿಶೂರ್‌  ಜಿಲ್ಲೆಯ ಕೊಟ್ಟೆಕ್ಕಾಡ್ ಪ್ರದೇಶದಲ್ಲಿ ಮಹೀಂದ್ರಾ ಥಾರ್ ಮತ್ತು ಬಿಎಂಡಬ್ಲ್ಯು ನಡುವಿನ ರೇಸ್‌ ವೇಳೆ ಥಾರ್ ಕಾರು ಎಸ್‌ಯುವಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ವೃದ್ದ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು 67 ವರ್ಷದ ರವಿಶಂಕರ್ ಎಂದು ಗುರುತಿಸಲಾಗಿದೆ. ಸಂತ್ರಸ್ಥ ವ್ಯಕ್ತಿ ಮತ್ತು ಆತನ ಕುಟುಂಬ ಗುರುವಾಯೂರಿನಿಂದ ಮನಗೆ ಹಿಂದಿರುಗುತ್ತಿದ್ದಾಗ ಬುಧವಾರ ರಾತ್ರಿ 8.30 ರಿಂದ 9 ಗಂಟೆ ವೇಳೆ ಈ ಅಪಘಾತ ಸಂಭವಿಸಿದೆ. ಸಂತ್ರಸ್ತ ರವಿಶಂಕರ್ ಅವರ ಪತ್ನಿ, ಮಗಳು ಮತ್ತು ಮೊಮ್ಮಗಳು ಹಾಗೂ ಟ್ಯಾಕ್ಸಿ ಚಾಲಕನಿಗೆ ಗಾಯಗಳಾಗಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಯ್ಯೂರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಥಾರ್ ಮತ್ತು ಬಿಎಂಡಬ್ಲ್ಯು ಚಾಲಕರನ್ನು ಪ್ರಸ್ತುತ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಚಾಲನೆ ವೇಳೆ ಇಬ್ಬರೂ ಚಾಲಕರು ಮದ್ಯ ಸೇವನೆ ಮಾಡಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಎರಡು ಪ್ರತ್ಯೇಕ ಎಫ್‌ಐಆರ್‌
ಒಂದು ಸಾವಿಗೆ ಕಾರಣವಾದ ಮತ್ತು ಇನ್ನೊಂದು ಗಾಯಕ್ಕೆ ಕಾರಣವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಎಫ್ಐರ್ ಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಪ್ರಾಥಮಿಕ ವಿಚಾರಣೆಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಆಕಸ್ಮಿಕವಾಗಿ ಅಪಘಾತ ಸಂಭವಿಸಿದೆ ಎಂದು ಸಂತ್ರಸ್ತೆಯ ಪತ್ನಿ ಟಿವಿ ಚಾನೆಲ್‌ಗೆ ತಿಳಿಸಿದ್ದು, ತನ್ನನ್ನು ಟ್ಯಾಕ್ಸಿಯಿಂದ ಹೊರಕ್ಕೆ ಎಳೆದಾಗ, ಮುಂದಿನ ಸೀಟಿನಲ್ಲಿ ಕುಳಿತಿದ್ದ ತನ್ನ ಪತಿ ನಿತ್ರಾಣರಾಗಿದ್ದರು ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಸ್ಥಳೀಯರು ಜೀಪ್ ಅತಿವೇಗದಲ್ಲಿ ಚಲಿಸುತ್ತಿತ್ತು. ಇದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಟ್ಯಾಕ್ಸಿ ಚಾಲಕ ಮಾತನಾಡಿ ಬಿಎಂಡಬ್ಲ್ಯು ಅತಿವೇಗದಲ್ಲಿ ಹೋದ ನಂತರ ಮತ್ತೊಂದು ವಾಹನವು ವೇಗವಾಗಿ ಬರುತ್ತಿರುವುದನ್ನು ಕೇಳಿದೆ ಮತ್ತು ಕಾರನ್ನು ನಿಲ್ಲಿಸಿ ಅದನ್ನು ರಸ್ತೆಯ ಬದಿಗೆ ಸರಿಸಿದೆ. ಅದರ ಹೊರತಾಗಿಯೂ, ವೇಗವಾಗಿ ಬಂದ ಥಾರ್ ಜೀಪು ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದ್ದಾರೆ. ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ದೃಶ್ಯಗಳು ಅಪಘಾತದ ನಂತರ ಸ್ಥಳೀಯರು ಥಾರ್ ಚಾಲಕನನ್ನು ವಶಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ. ಆ ಪ್ರದೇಶದಿಂದ ಬಿಎಂಡಬ್ಲ್ಯು ವೇಗವಾಗಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ ಇಬ್ಬರ ಬೇಜವಾಬ್ದಾರಿಯಿಂದಾಗಿ ಒಂದು ಅಮಾಯಕ ಜೀವ ಬಲಿಯಾಗಿದೆ.

SCROLL FOR NEXT