ದೇಶ

ಆಂಧ್ರ ಪ್ರದೇಶ ಕೃಷಿ ಸಚಿವ ಕಾಕನಿಗೆ ಕಾಲ್ ಮಾಡಿ ಸಾಲ ಮರುಪಾವತಿಗಾಗಿ ಒತ್ತಾಯಿಸಿದ ಏಜೆಂಟ್‌ಗಳ ಬಂಧನ

Lingaraj Badiger

ನೆಲ್ಲೂರು: ನೆಲ್ಲೂರು ನಿವಾಸಿಯೊಬ್ಬರು ಮೊಬೈಲ್ ಆ್ಯಪ್ ಮೂಲಕ ಪಡೆದ ಸಾಲವನ್ನು ಮರುಪಾವತಿಸುವಂತೆ ಆಂಧ್ರ ಪ್ರದೇಶ ಕೃಷಿ ಸಚಿವ ಕಾಕಣಿ ಗೋವರ್ಧನರೆಡ್ಡಿ ಅವರ ಆಪ್ತ ಸಹಾಯಕ ಚೆರುಕುರಿ ಶಂಕರಯ್ಯ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಚೆನ್ನೈ ಮೂಲದ ಸಂಸ್ಥೆಯೊಂದರ ನಾಲ್ವರು ಸಾಲ ವಸೂಲಾತಿ ಏಜೆಂಟ್ ಗಳನ್ನು ಬಂಧಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ವಿಜಯ ರಾವ್ ಅವರ ಪ್ರಕಾರ, ನೆಲ್ಲೂರು ನಗರದ ಪಿ.ಅಶೋಕ್ ಕುಮಾರ್ ಅವರು 8.50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅವರು ಸಾಲ ಮರುಪಾವತಿಸಲು ವಿಫಲವಾದ ನಂತರ, ಸಾಲ ವಸೂಲಾತಿ ಏಜೆನ್ಸಿ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಜನರಿಗೆ ಕರೆ ಮಾಡಿದ್ದಾರೆ. ಈ ವೇಳೆ ರಿಕವರಿ ಏಜೆಂಟ್‌ಗಳು ಅಶೋಕ್ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದ ಕೃಷಿ ಸಚಿವರಿಗೆ ಕರೆ ಮಾಡಿದ್ದಾರೆ. ಏಕೆಂದರೆ ಅಶೋಕ್ ಅವರ ಸಾಲದ ಅರ್ಜಿಯಲ್ಲಿ ಕೃಷಿ ಸಚಿವರ ನಂಬರ್ ಅನ್ನು ಪರ್ಯಾಯ ನಂಬರ್ ಆಗಿ ನೀಡಿದ್ದಾರೆ.

ಸಚಿವರ ಆಪ್ತ ಸಹಾಯಕ ಶಂಕರಯ್ಯ ಕರೆ ಸ್ವೀಕರಿಸಿದ್ದು, 25,000 ರೂ. ಸಾಲ ತೀರಿಸುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸರಗೊಂಡ ಶಂಕರಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

"ಪ್ರಕರಣ ದಾಖಲಿಸಿಕೊಂಡ ಕೃಷ್ಣಪಟ್ಟಣಂ ವೃತ್ತದ ಪೊಲೀಸ್ ತಂಡ ಚೆನ್ನೈನಲ್ಲಿ ಸಾಲ ವಸೂಲಾತಿ ಏಜೆಂಟ್‌ಗಳನ್ನು ಬಂಧಿಸಿದೆ ಮತ್ತು ಅವರ ಬಳಿಯಿದ್ದ ಲ್ಯಾಪ್‌ಟಾಪ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು 10,000 ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ" ಎಂದು ಎಸ್‌ಪಿ ಹೇಳಿದ್ದಾರೆ.

SCROLL FOR NEXT