ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ಸೇನಾ ಉದ್ಯೋಗಾಕಾಂಕ್ಷಿಗಳ ಬೆಂಬಲಕ್ಕೆ ನಿಂತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಯುವಕರಿಗೆ ಕೇವಲ ನಾಲ್ಕು ವರ್ಷ ಉದ್ಯೋಗ ನೀಡದೆ ಅವರ ಜೀವನದುದ್ದಕ್ಕೂ ದೇಶ ಸೇವೆ ಮಾಡುವ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದ ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
ಇದನ್ನು ಓದಿ: 'ಅಗ್ನಿಪಥ' ವಿರುದ್ಧ ಬೀದಿಗಿಳಿದ ಸೇನಾಕಾಂಕ್ಷಿಗಳು; ಬಿಹಾರದಲ್ಲಿ ರೈಲಿಗೆ ಬೆಂಕಿ, ಬಿಜೆಪಿ ಶಾಸಕನಿಗೆ ಗಾಯ
ಯುವಕರಿಗೆ ನಾಲ್ಕು ವರ್ಷವಲ್ಲ, ಇಡೀ ಜೀವಿತಾವಧಿಯಲ್ಲಿ ದೇಶ ಸೇವೆ ಮಾಡುವ ಅವಕಾಶ ನೀಡಬೇಕು. ಕಳೆದ ಎರಡು ವರ್ಷಗಳಲ್ಲಿ ಸೇನೆಯಲ್ಲಿ ನೇಮಕಾತಿ ನಡೆದಿಲ್ಲ. ಹೀಗಾಗಿ ವಯಸ್ಸಿನ ಮಿತಿಯನ್ನು ಸಡಿಲಿಸಬೇಕು ಎಂದು ಕೇಜ್ರಿವಾಲ್ ಅವರು ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಗ್ನಿಪಥ್ ಯೋಜನೆಯಿಂದ ಯುವಕರು ಆಕ್ರೋಶಗೊಂಡಿದ್ದಾರೆ ಮತ್ತು ದೇಶಾದ್ಯಂತ ಅಗ್ನಿಪಥ್ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಈ ಕ್ರಮವು ದೇಶದಾದ್ಯಂತ, ವಿಶೇಷವಾಗಿ ಬಿಹಾರದಲ್ಲಿ ಹಲವಾರು ಸ್ಥಳಗಳಲ್ಲಿ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.