ದೇಶ

'ಮೋದಿಯವರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು, ಆದರೆ ಆಗ ಯಾವುದೇ ಧರಣಿ, ಪ್ರತಿಭಟನೆ ಮಾಡಿರಲಿಲ್ಲ': ಅಮಿತ್ ಶಾ

Sumana Upadhyaya

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ವಿಚಾರಿಸುತ್ತಿರುವುದರ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಬೆಂಬಲಿಗರು ನಡೆಸುತ್ತಿರುವ ಸತ್ಯಾಗ್ರಹ, ಧರಣಿ, ಪ್ರತಿಭಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಗೋಧ್ರಾ ಹತ್ಯಾಕಾಂಡ ನಂತರ ನಡೆದ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದರು. ಆದರೆ ಬಿಜೆಪಿ ಯಾವತ್ತಿಗೂ ಧರಣಿ, ಪ್ರತಿಭಟನೆಯಂತಹ ನಾಟಕವಾಡಲಿಲ್ಲ, ಇಂದು ಕಾಂಗ್ರೆಸ್ ಮಾಡುತ್ತಿರುವುದು ನಾಟಕ ಎಂದು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ, ಎಲ್ಲಾ ರಾಜಕೀಯ ವ್ಯಕ್ತಿಗಳು ಸಂವಿಧಾನವನ್ನು ಹೇಗೆ ಗೌರವಿಸಬೇಕು ಎಂಬುದಕ್ಕೆ ಪ್ರಧಾನಿ ಮೋದಿ ಆದರ್ಶ ಉದಾಹರಣೆಯಾಗಿದ್ದಾರೆ. ಮೋದಿಯವರನ್ನೂ ತನಿಖಾ ಸಂಸ್ಥೆಗಳು ಹಲವು ಬಾರಿ ವಿಚಾರಣೆ ನಡೆಸಿದ್ದವು. ಆದರೆ ಯಾರೂ ಪ್ರತಿಭಟಿಸಲಿಲ್ಲ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮೋದಿಜಿಯೊಂದಿಗೆ ಒಗ್ಗಟ್ಟಿನಿಂದ ಒಟ್ಟುಗೂಡಲಿಲ್ಲ. ನಾವು ಕಾನೂನಿಗೆ ಸಹಕರಿಸಿದ್ದೇವೆ. ನನ್ನನ್ನೂ ಬಂಧಿಸಲಾಗಿತ್ತು. ಆದರೆ ಯಾವುದೇ ಪ್ರತಿಭಟನೆ ನಡೆದಿರಲಿಲ್ಲ, ಆದರೆ ಇಂದು ಕಾಂಗ್ರೆಸ್ ಮಾಡುತ್ತಿರುವುದೇನು ಎಂದು ಕೇಳಿದರು.

ಪ್ರಧಾನಿ ಮೋದಿಗೆ ಇದು ಮೊದಲ ಕ್ಲೀನ್ ಚಿಟ್ ಅಲ್ಲ. ನಾನಾವತಿ ಆಯೋಗವೂ ಕ್ಲೀನ್ ಚಿಟ್ ನೀಡಿದೆ. ಆದರೂ ಎಸ್‌ಐಟಿ ರಚನೆಯಾಯಿತು. ಆದರೆ ಮೋದಿಯವರು ಎಸ್‌ಐಟಿ ಮುಂದೆ ನಾಟಕವಾಡಲಿಲ್ಲ ಎಂದು ಪ್ರತಿ ಹಳ್ಳಿಯಿಂದ ರಾಜ್ಯ, ಜಿಲ್ಲೆಗಳಿಂದ ಶಾಸಕರು, ಸಂಸದರು ಮತ್ತು ಮಾಜಿ ಸಂಸದರನ್ನು ಕರೆಸಿ, ಧರಣಿ ಮಾಡಿಸುವ ಕಾಂಗ್ರೆಸ್ ನ ನಡೆಯನ್ನು ಟೀಕಿಸಿದರು.

ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾವು ಸಹಕರಿಸಬೇಕು. ಸುಪ್ರೀಂ ಕೋರ್ಟ್ ಆದೇಶವಿತ್ತು, ಎಸ್‌ಐಟಿ ಇತ್ತು. ಎಸ್‌ಐಟಿ ಮುಖ್ಯಮಂತ್ರಿಯಿಂದ ಪ್ರಶ್ನೆಗಳನ್ನು ಕೇಳಲು ಬಯಸಿದರೆ, ಅವರೇ ಸಹಕರಿಸಲು ಸಿದ್ಧ ಎಂದು ಹೇಳಿದರು. ಈ ದೇಶದಲ್ಲಿ ಕಾನೂನಿಗೆ ಮೀರಿದ ವ್ಯಕ್ತಿ ಯಾರೂ ಇಲ್ಲ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾವು ಸಹಕರಿಸಬೇಕು ಎಂಬುದನ್ನು ನಾವು ನಂಬುತ್ತೇವೆ. ನ್ಯಾಯಾಂಗ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಶಾ ಹೇಳಿದರು.

SCROLL FOR NEXT