ಲಖನೌ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಟ್ವೀಟ್ನಲ್ಲಿ ದ್ರೌಪದಿ ಮುರ್ಮು ವಿರುದ್ಧ ಅಸಭ್ಯ ಟೀಕೆ ಮಾಡಿದ್ದಕ್ಕಾಗಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಖನೌ ಪೊಲೀಸ್ ಆಯುಕ್ತ ಡಿಕೆ ಠಾಕೂರ್ ಅವರು ಹೇಳಿದ್ದಾರೆ.
ಈ ಸಂಬಂಧ ಭಾನುವಾರ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 22 ರಂದು ವಿವಾದಾತ್ಮಕ ಟ್ವೀಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ, "ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಮತ್ತು ಮುಖ್ಯವಾಗಿ ಕೌರವರು ಯಾರು?" ಎಂದು ಪ್ರಶ್ನಿಸಿದ್ದರು. ಈ ಟ್ವೀಟ್ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸ್ಪಷ್ಟನೆ ನೀಡಿದ ರಾಮ್ ಗೋಪಾಲ್ ವರ್ಮಾ, ಇದನ್ನು ಕೇವಲ ವ್ಯಂಗ್ಯವಾಗಿ ಹೇಳಲಾಗಿದೆ ಮತ್ತು ಬೇರೆ ಯಾವುದೇ ರೀತಿಯ ಉದ್ದೇಶದಿಂದ ಅಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಇದನ್ನು ಓದಿ: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಟ್ವೀಟ್, ರಾಮ್ ಗೋಪಾಲ್ ವರ್ಮ ವಿರುದ್ಧ ದೂರು, ನಿರ್ದೇಶಕರ ಸ್ಪಷ್ಟನೆಯೇನು?
ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರ. ಅಲ್ಲದೆ ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಈಗ ದ್ರೌಪದಿ ಅಂತ ಹೆಸರು ಕೇಳಿದ ತಕ್ಷಣ ನಾನು ಮಹಾಭಾರತದ ಪಾತ್ರವನ್ನು ನೆನಪಿಸಿಕೊಂಡೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರಲು ನಾನು ಈ ರೀತಿ ಟ್ವೀಟ್ ಮಾಡಿಲ್ಲ' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.