ದೇಶ

'ಮಹಾ' ಅಘಾಡಿ ಸರ್ಕಾರ ಪತನ ಬಳಿಕ ಮುಂದೇನು? ಮುಂದಿನ ಸರ್ಕಾರ ರಚನೆಯತ್ತ ಎಲ್ಲರ ಚಿತ್ತ ರಾಜಭವನದತ್ತ!

Sumana Upadhyaya

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸಲು ಬಿಜೆಪಿಯನ್ನು ಯಾವಾಗ ಆಹ್ವಾನಿಸುತ್ತಾರೆ, ಮುಂದಿನ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬರಲಿದೆ ಎಂದು ಎಲ್ಲರ ಚಿತ್ತ ರಾಜಭವನದತ್ತ ನೆಟ್ಟಿದೆ.

ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಸುಮಾರು 40 ಶಾಸಕರ ಬಂಡಾಯದೊಂದಿಗೆ ರಾಜ್ಯದಲ್ಲಿ ಆಡಳಿತ ಬದಲಾವಣೆಯ ಪ್ರಕ್ರಿಯೆಯು ಪ್ರಾರಂಭವಾಯಿತು, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕಳೆದ ಮಂಗಳವಾರ ರಾತ್ರಿ ಕೊಶ್ಯಾರಿ ಅವರನ್ನು ಭೇಟಿಯಾಗಿ ಸದನದಲ್ಲಿ ಬಹುಮತ ಸಾಬೀತಿಗೆ ಆದೇಶಿಸುವಂತೆ ರಾಜ್ಯಪಾಲರನ್ನು ಕೇಳಿಕೊಂಡ ನಂತರ ಸರ್ಕಾರ ಪತನ ಪ್ರಕ್ರಿಯೆ ವೇಗ ಪಡೆದುಕೊಂಡಿತು. 

ನಿನ್ನೆ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲ ಕೊಶ್ಯಾರಿ ಅವರ ನಿರ್ದೇಶನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ನಿಮಿಷಗಳಲ್ಲಿ 62 ವರ್ಷದ ಉದ್ಧವ್ ಠಾಕ್ರೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಾನು ಅಧಿಕಾರದಲ್ಲಿರಲು ಆಟವಾಡುವುದಿಲ್ಲ. ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರಿಂದ ಬೆಳೆದವರು ಅವರ ಮಗನನ್ನು ಕೆಳಕ್ಕೆ ಎಳೆದಿದ್ದಾರೆ ಎಂದು ಹೇಳಬಹುದು. ನಾನು ಅವರ ಮೇಲೆ ನಂಬಿಕೆ ಇಟ್ಟದ್ದು ನನ್ನ ತಪ್ಪು. ನನ್ನ ಶಿವಸೈನಿಕರ ರಕ್ತ ಬೀದಿಯಲ್ಲಿ ಚೆಲ್ಲುವುದು ಬೇಡ ಹಾಗಾಗಿ ನಾನು ಸಿಎಂ ಸ್ಥಾನದಿಂದ ಹಾಗೂ ಎಂಎಲ್‌ಸಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಲೈವ್ ನಲ್ಲಿ ಬಂದು ಉದ್ಧವ್  ಠಾಕ್ರೆ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 

ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನ್ನು ಮರುನಾಮಕರಣ ಮಾಡುವ ತನ್ನ ತಂದೆಯ ಆಸೆಯನ್ನು ಪೂರೈಸಲು ನನಗೆ ಸಂತೋಷವಾಗಿದೆ ಎಂದು ಠಾಕ್ರೆ ಹೇಳಿದರು. ಉದ್ಧವ್ ನೇತೃತ್ವದ ಕ್ಯಾಬಿನೆಟ್ ಬುಧವಾರ ಎರಡು ನಗರಗಳನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು. ಅವರ ರಾಜೀನಾಮೆಯನ್ನು ಬಿಜೆಪಿ ಮುಖಂಡರು ಸಿಹಿ ಹಂಚಿ ಸಂಭ್ರಮದಿಂದ ಸ್ವಾಗತಿಸಿದರು.

2014 ರಿಂದ 2019 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಪುನರಾವರ್ತನೆಯಾಗುವ ನಿರೀಕ್ಷೆಯಿದೆ, ಮುಂದಿನ ಸರ್ಕಾರವನ್ನು ರಚಿಸಲು ಹಕ್ಕು ಸಾಧಿಸುವ ಮುಂದಿನ ಕ್ರಮದ ಕುರಿತು ಇಂದು ಸಂಜೆ ಮಾಧ್ಯಮಗಳಿಗೆ ತಿಳಿಸುವ ಸಾಧ್ಯತೆಯಿದೆ.

ಸೂರತ್ ಮತ್ತು ಗುವಾಹಟಿಯ ಐಷಾರಾಮಿ ರೆಸಾರ್ಟ್‌ಗಳಲ್ಲಿ ಒಂದು ವಾರ ಕಳೆದ ನಂತರ ಈಗ ಗೋವಾದ ಐಷಾರಾಮಿ ಹೋಟೆಲ್‌ನಲ್ಲಿರುವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನಾ ಶಾಸಕರು ಶೀಘ್ರದಲ್ಲೇ ಮುಂಬೈಗೆ ಮರಳುವ ನಿರೀಕ್ಷೆಯಿದೆ. ಶಿಂಧೆ ನೇತೃತ್ವದ ಗುಂಪು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಈ ಮಧ್ಯೆ, ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಗುರುವಾರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ನಡೆಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ, ಶಿವಸೇನಾ ಬಂಡಾಯ ಶಾಸಕರು ಶೀಘ್ರದಲ್ಲೇ ಮುಂಬೈಗೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ, ಪೊಲೀಸರು ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT