ದೇಶ

'ಮತದಾರರ ತೀರ್ಪನ್ನು ಸ್ವೀಕರಿಸುತ್ತೇನೆ': ಪಂಜಾಬ್ ಸಿಎಂ ಸ್ಥಾನಕ್ಕೆ ಚರಂಜಿತ್ ಸಿಂಗ್ ಚನ್ನಿ ರಾಜಿನಾಮೆ

Srinivasamurthy VN

ಅಮೃತಸರ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹಾಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಇಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಚಂಡೀಗಢದಲ್ಲಿರುವ ರಾಜ್ಯಪಾಲರ ಅಧಿಕೃತ ನಿವಾಸಕ್ಕೆ ಸಿಎಂ ಚನ್ನಿ ಆಗಮಿಸಿ ಚನ್ನಿ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. 

ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ 11:30ಕ್ಕೆ ಚಂಡೀಗಢದ ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್‌ನಲ್ಲಿ ಪಂಜಾಬ್ ಕ್ಯಾಬಿನೆಟ್ ಸಭೆ ನಡೆಯಿತು, ನಂತರ ಚನ್ನಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೆಳಗಿಳಿದ ನಂತರ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಚನ್ನಿ, ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎಂಬ ಎರಡು ಕ್ಷೇತ್ರಗಳಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಎರಡೂ ಸ್ಥಾನಗಳಲ್ಲಿ ಅವರು ಸೋತಿದ್ದರು.

ಅವರು 2017 ರವರೆಗೆ ಸತತ ಮೂರು ಅವಧಿಗೆ ಪ್ರತಿನಿಧಿಸಿರುವ ಚಮ್ಕೌರ್ ಸಾಹಿಬ್ ಕ್ಷೇತ್ರದಲ್ಲಿ, ಚನ್ನಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಡಾ ಚರಂಜಿತ್ ಸಿಂಗ್ ಚನ್ನಿ ಅವರಿಂದ ಸುಮಾರು 6,000 ಮತಗಳಿಂದ ಸೋಲಿಸಲ್ಪಟ್ಟರು. ಇತ್ತ ಮತ್ತೊಂದು ಕ್ಷೇತ್ರ ಭದೌರ್‌ನಲ್ಲಿಯೂ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ 57,000 ಮತಗಳನ್ನು ಪಡೆದರೆ, ಚನ್ನಿ 23,000 ಮತಗಳನ್ನು ಪಡೆದರು. ಆ ಮೂಲಕ ಬರೊಬ್ಬರಿ 34 ಸಾವಿರ ಮತಗಳ ಅಂತರದಲ್ಲಿ ಚನ್ನಿ ಸೋತರು.

ಪಂಜಾಬ್ ಚುನಾವಣೆ 2022 ರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 92 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಆಡಳಿತಾರೂಢ ಕಾಂಗ್ರೆಸ್ ಕೇವಲ 18 ವಿಧಾನಸಭಾ ಸ್ಥಾನಗಳನ್ನು ಮತ್ತು ಶಿರೋಮಣಿ ಅಕಾಲಿದಳದ 4 ಸ್ಥಾನಗಳನ್ನು ಮಾತ್ರ ಗೆದ್ದಿದೆ. 1962 ರಿಂದ ಯಾವುದೇ ಪಕ್ಷವು ಪಂಜಾಬ್‌ನಲ್ಲಿ 90 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿಲ್ಲ, ಹೀಗಾಗಿ, ಇದು ಆಮ್ ಆದ್ಮಿ ಪಕ್ಷಕ್ಕೆ ಐತಿಹಾಸಿಕ ವಿಜಯವಾಗಿದೆ. ಎಎಪಿಯಿಂದ ಭಗವಂತ್ ಮಾನ್ ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ. 

SCROLL FOR NEXT