ದೇಶ

ಅಪ್ಪನ ಜೀವ ಉಳಿಸಲು ಮುಂದಾದ ಮಗಳು: ಲಾಲೂ ಪ್ರಸಾದ್ ಗೆ ಕಿಡ್ನಿ ನೀಡಲಿದ್ದಾರೆ ಪುತ್ರಿ ರೋಹಿಣಿ ಆಚಾರ್ಯ!

Shilpa D

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್  ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆ ಮತ್ತು ಇತರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿರುವ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ತಂದೆಯ ಜೀವ ಉಳಿಸಲು ತಮ್ಮ ಕಿಡ್ನಿಗಳಲ್ಲಿ ಒಂದನ್ನು ಲಾಲೂ ಪ್ರಸಾದ್ ಯಾದವ್ ಅವರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಸಿಂಗಾಪುರಕ್ಕೆ ಭೇಟಿ ಕೊಟ್ಟ ಲಾಲು ಪ್ರಸಾದ್ ಯಾದವ್ ಅವರಿಗೆ, ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಬಳಿಕ ರೋಹಿಣಿ ಅವರು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ಮುಂದಾಗಿದ್ದಾರೆ.

ತಮ್ಮ ಜೀವವನ್ನು ಉಳಿಸಿಕೊಳ್ಳಲು ಮೊದಲಿಗೆ ರೋಹಿಣಿ ಕಿಡ್ನಿಯನ್ನು ಪಡೆಯಲು ಲಾಲೂ ಪ್ರಸಾದ್ ಒಪ್ಪಿಕೊಳ್ಳಲಿಲ್ಲ. ಆದರೆ ಆಕೆಯ ಮತ್ತು ಕುಟುಂಬಸ್ಥರ ಒತ್ತಡದ ಮೇರೆಗೆ ಕೊನೆಗೆ ಕಿಡ್ನಿ ಪಡೆಯಲು ಒಪ್ಪಿಕೊಂಡಿದ್ದಾರೆ. ನವೆಂಬರ್ 20 ರಿಂದ 24ರ ಒಳಗೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.

ಲಾಲು ಪ್ರಸಾದ್ ಅವರ ಎರಡನೇ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದು, ತಮ್ಮ ತಂದೆಗೆ ಮೂತ್ರಪಿಂಡ ಕಾಯಿಲೆ ಸಮಸ್ಯೆ ಇರುವ ಬಗ್ಗೆ ಬಹಳ ಆತಂಕಕ್ಕೊಳಗಾಗಿದ್ದರು. ನಂತರ ಮೂತ್ರಪಿಂಡ ಕಸಿ ಸಲಹೆ ನೀಡಿದ ವೈದ್ಯರ ತಂಡವನ್ನು ಸಂಪರ್ಕಿಸಲು ಲಾಲು ಪ್ರಸಾದ್ ಅವರು ಸಿಂಗಾಪುರಕ್ಕೆ ಭೇಟಿ ನೀಡಿದ್ದರು.

SCROLL FOR NEXT