ನವದೆಹಲಿ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರದ್ದುಪಡಿಸಲಾದ ದೆಹಲಿ ಅಬಕಾರಿ ನೀತಿಯ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಇಡಿ) ಆಮ್ ಆದ್ಮಿ ಪಕ್ಷದ(ಎಎಪಿ) ಸಂವಹನ ಉಸ್ತುವಾರಿ ವಿಜಯ್ ನಾಯರ್ ಮತ್ತು ಉದ್ಯಮಿ ಅಭಿಷೇಕ್ ಬೋಯಿನ್ಪಲ್ಲಿ ಅವರನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ.
ಕಳೆದ ವಾರ ಕೇಂದ್ರ ತನಿಖಾ ಸಂಸ್ಥೆಯಿಂದ ಬಂಧಿಸಲ್ಪಟ್ಟ ಇತರ ಆರೋಪಿಗಳಾದ ಪಿ ಶರತ್ ಸಿ ರೆಡ್ಡಿ ಮತ್ತು ಬಿನೋಯ್ ಬಾಬು ಸೇರಿದಂತೆ ಎಲ್ಲಾ ಆರೋಪಿಗಳನ್ನು ಪರಸ್ಪರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಅಬಕಾರಿ ನೀತಿ ಹಗರಣ: ಮಂಪರು ಪರೀಕ್ಷೆಗೆ ಒಳಗಾಗಿ ಆರೋಪ ಸುಳ್ಳೆಂದು ಸಾಬೀತುಪಡಿಸಿ; ಕೇಜ್ರಿವಾಲ್ಗೆ ಬಿಜೆಪಿ ಸವಾಲು
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಓನ್ಲಿ ಮಚ್ ಲೌಡರ್ (ಒಎಂಎಲ್) ಎಂಬ ಮನರಂಜನಾ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಮಾಜಿ ಸಿಇಒ ನಾಯರ್ ಅವರನ್ನು ಸೆಪ್ಟೆಂಬರ್ನಲ್ಲಿ ಬಂಧಿಸಿದ್ದರೆ, ಹೈದರಾಬಾದ್ ಮೂಲದ ಉದ್ಯಮಿ ಬೋಯಿನ್ಪಲ್ಲಿ ಅವರನ್ನು ಕಳೆದ ತಿಂಗಳು ಬಂಧಿಸಿತ್ತು.
ಸಿಬಿಐ ವಿಚಾರಣೆಯ ನಂತರ ಕಳೆದ ತಿಂಗಳು ಈ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದೀಗ ಇಡಿ ತನ್ನ ವಶಕ್ಕೆ ಪಡೆದಿದೆ.