ದೇಶ

ದೆಹಲಿ ಅಬಕಾರಿ ನೀತಿ ಹಗರಣ: ತನಿಖಾ ಸಂಸ್ಥೆಗಳು ನೀಡಿರುವ ಮಾಧ್ಯಮ ಪ್ರಕಟಣೆಗಳನ್ನು ಕೇಳಿದ ಹೈಕೋರ್ಟ್

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಹೊರಡಿಸಿರುವ ಎಲ್ಲಾ ಮಾಧ್ಯಮ ಹೇಳಿಕೆಗಳು ಮತ್ತು ಪ್ರಕಟಣೆಗಳನ್ನು ತನ್ನ ಮುಂದಿಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ಸಿಬಿಐ ಮತ್ತು ಇ.ಡಿಗೆ ಸೂಚಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಉದ್ಯಮಿ ವಿಜಯ್ ನಾಯರ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ತನಿಖಾ ಸಂಸ್ಥೆಗಳು ನೀಡಿದ ಅಧಿಕೃತ ಮಾಧ್ಯಮ ಹೇಳಿಕೆಗಳನ್ನು ಪರಿಗಣಿಸುವುದಾಗಿ ಮತ್ತು ಟಿವಿ ಚಾನೆಲ್‌ಗಳು ಈ ವಿಷಯದ ಕುರಿತು ಪ್ರಸಾರ ಮಾಡಿರುವ ವರದಿಗಳು ಇದನ್ನು ಆಧರಿಸಿವೆಯೇ ಅಥವಾ ಅವರ ಕಲ್ಪನೆಯೇ ಎಂದು ನೋಡುವುದಾಗಿ ನ್ಯಾಯಾಲಯ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಗಳನ್ನು ತನಿಖಾ ಸಂಸ್ಥೆಗಳು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿವೆ. ಈ ರೀತಿಯಾಗಿ ಸೋರಿಕೆ ಮಾಡುವುದು ಆರೋಪಿಯಾಗಿ ಅವರ ಹಕ್ಕಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಆಪ್ ನಾಯಕ ವಿಜಯ್ ನಾಯರ್ ಸಲ್ಲಿಸಿದ ಮನವಿ ಮೇರೆಗೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಸಿಬಿಐ ಮತ್ತು ಇ.ಡಿ ಕ್ರಿಮಿನಲ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅವರು ಹೊರಡಿಸಿದ ಎಲ್ಲಾ ಪತ್ರಿಕಾ ಹೇಳಿಕೆಗಳು ಮತ್ತು ಪತ್ರಿಕಾ ಪ್ರಕಟಣೆಗಳನ್ನು ಮುಂದಿರಿಸಲು ಸಮಯ ನೀಡಲಾಗಿದ್ದು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ನವೆಂಬರ್ 21 ರಂದು ಮುಂದಿನ ವಿಚಾರಣೆ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವಿಜಯ್ ನಾಯರ್ ಅವರು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ನಾಯಕರಾಗಿದ್ದಾರೆ.

ನಾಯರ್ ಪರ ವಾದ ಮಂಡಿಸಿದ ಹಿರಿಯ ವಕೀಲ ದಯನ್ ಕೃಷ್ಣನ್, 'ಸುದ್ದಿ ಸಂಸ್ಥೆಗಳು ಕಲ್ಪನೆಯ ಆಧಾರದ ಮೇಲೆ ವರದಿ ನೀಡಿದರೆ ಅದು ಅಪಾಯಕಾರಿ' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, 'ಹಾಗಾದರೆ ಇದು ನಮಗೆ ಎಚ್ಚರಿಕೆ' ಎಂದು ಹೇಳಿದರು.  ವಿಚಾರಣೆಯು ನಿರ್ಣಾಯಕ ಹಂತದಲ್ಲಿದೆ ಮತ್ತು ಅದರ ವಿವರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದಾಗ, ತನ್ನ ಕಕ್ಷಿದಾರನ ಹಕ್ಕುಗಳಿಗೆ ಹಾನಿಯಾಗುತ್ತದೆ ಎಂದು ಕೃಷ್ಣನ್ ಹೇಳಿದರು.

ತನಿಖಾ ಸಂಸ್ಥೆಗಳ ಮೂಲಕವೇ ಎಲ್ಲಾ ಮಾಹಿತಿಗಳು ಮಾಧ್ಯಮಗಳಿಗೆ ತಲುಪುತ್ತಿವೆ ಎಂದು ಅವರು ಪ್ರತಿಪಾದಿಸಿದರು ಮತ್ತು ಟಿವಿ ಚಾನೆಲ್‌ಗಳು ತಮಗೆ ಒದಗಿಸಿದ ಮಾಹಿತಿಯನ್ನು ಮೀರಿ ಏನನ್ನಾದರೂ ಪ್ರಸಾರ ಮಾಡುತ್ತವೆಯೇ ಎಂದು ನ್ಯಾಯಾಲಯ ಪರಿಶೀಲಿಸಬೇಕು ಎಂದು ಹೇಳಿದರು.

SCROLL FOR NEXT