ದೇಶ

ಕಥುವಾ ಗ್ಯಾಂಗ್ ರೇಪ್: ಆರೋಪಿ ವಯಸ್ಕ, ಬಾಲಾಪರಾಧಿಯಾಗಿ ಪರಿಗಣಿಸಬಾರದು ಎಂದ ಸುಪ್ರೀಂ ಕೋರ್ಟ್

Ramyashree GN

ನವದೆಹಲಿ: ಕಥುವಾದಲ್ಲಿ ಎಂಟು ವರ್ಷದ ಅಲೆಮಾರಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬಾತ ಬಾಲಾಪರಾಧಿ ಅಲ್ಲ ಮತ್ತು ತನ್ನ ಅಪರಾಧಗಳಿಗಾಗಿ ಈಗ ವಯಸ್ಕನಾಗಿ ಮತ್ತೆ ವಿಚಾರಣೆಗೆ ಒಳಪಡಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಶಾಸನಬದ್ಧ ಪುರಾವೆಗಳ ಅನುಪಸ್ಥಿತಿಯಲ್ಲಿ ಆರೋಪಿಯ ವಯಸ್ಸಿನ ಬಗ್ಗೆ ವೈದ್ಯಕೀಯ ಅಭಿಪ್ರಾಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಕರಣದಲ್ಲಿ ಆರೋಪಿಯ ವಯಸ್ಸನನ್ನು ನಿರ್ಧರಿಸಲು ಯಾವುದೇ ನಿರ್ಣಾಯಕ ಸಾಕ್ಷ್ಯವಿಲ್ಲದ ಕಾರಣ ವಯಸ್ಸಿನ ಬಗ್ಗೆ ವೈದ್ಯಕೀಯ ಅಭಿಪ್ರಾಯವನ್ನೇ ಪರಿಗಣಿಸಬೇಕು. ವೈದ್ಯಕೀಯ ಸಾಕ್ಷ್ಯವನ್ನು ಅವಲಂಬಿಸಬಹುದೇ ಅಥವಾ ಇಲ್ಲವೇ ಎಂಬುದು ಸಾಕ್ಷ್ಯದ ಮೌಲ್ಯವನ್ನು ಅವಲಂಬಿಸಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠ ಹೇಳಿದೆ.

ಆರೋಪಿ ಶುಭಂ ಸಂಗ್ರಾ ಬಾಲಾಪರಾಧಿಯಾಗಿದ್ದು, ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಬೇಕು ಎನ್ನುವ ಕಥುವಾದಲ್ಲಿನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು ಹೈಕೋರ್ಟ್‌ನ ಆದೇಶಗಳನ್ನು ಅದು ರದ್ದುಗೊಳಿಸಿತು.

ನಾವು ಕಥುವಾದ ಮುಖ್ಯ ಮ್ಯಾಜಿಸ್ಟ್ರೇಟ್ ಮತ್ತು ಹೈಕೋರ್ಟ್‌ ನೀಡಿರುವ ತೀರ್ಪುಗಳನ್ನು ಬದಿಗಿಟ್ಟಿದ್ದು, ಅಪರಾಧದ ಸಮಯದಲ್ಲಿ ಆರೋಪಿಯು ಬಾಲಾಪರಾಧಿಯಾಗಿರಲಿಲ್ಲ ಎಂದು ನ್ಯಾಯಮೂರ್ತಿ ಪರ್ದಿವಾಲಾ ತಿಳಿಸಿದ್ದಾರೆ.

2019ರಲ್ಲಿ ಕಥುವಾ ಗ್ರಾಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಜೂನ್ 2019 ರಲ್ಲಿ ವಿಶೇಷ ನ್ಯಾಯಾಲಯವು ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಮತ್ತು ಸಾಕ್ಷ್ಯ ನಾಶಪಡಿಸಿದ ಮೂವರು ಪೊಲೀಸ್ ಅಧಿಕಾರಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಸಂಗ್ರಾ ವಿರುದ್ಧದ ವಿಚಾರಣೆಯನ್ನು ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಲಾಯಿತು.

SCROLL FOR NEXT