ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನಿಗೆ ಐದು ದಿನಗಳೊಳಗೆ ನಾರ್ಕೋ ಅನಾಲಿಟಿಕ್ ಪರೀಕ್ಷೆ ಪೂರ್ಣಗೊಳಿಸುವಂತೆ ದೆಹಲಿ ನ್ಯಾಯಾಲಯವು ನಗರ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ ಆರೋಪಿ ಅಫ್ತಾಬ್ ಮೇಲೆ ಥರ್ಡ್ ಡಿಗ್ರಿ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಜಯಶ್ರೀ ರಾಥೋಡ್ ಅವರು ಐದು ದಿನಗಳೊಳಗೆ ಆರೋಪಿಗೆ ನಾರ್ಕೋ-ಅನಾಲಿಟಿಕ್ ಪರೀಕ್ಷೆಯನ್ನು ನಡೆಸಲು ತನಿಖಾಧಿಕಾರಿಗೆ ಅವಕಾಶ ನೀಡುವಂತೆ ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸೂಚಿಸಿದರು.
ಇದನ್ನೂ ಓದಿ: 'ಅಫ್ತಾಬ್ ನನ್ನು ಗಲ್ಲಿಗೇರಿಸಿ': ಶ್ರದ್ಧಾ ಹತ್ಯೆ ಆರೋಪಿ ವಿರುದ್ಧ ದೆಹಲಿ ಕೋರ್ಟ್ ನಲ್ಲಿ ಘೋಷಣೆ ಕೂಗಿದ ವಕೀಲರು!
28ರ ಹರೆಯದ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾ ವಾಲ್ಕರ್ನನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಜ್ನಲ್ಲಿ ಇರಿಸಿದ್ದನು. ಸುಮಾರು 18 ದಿನಗಳ ಕಾಲ ದೇಹದ ಕೆಲ ಭಾಗಗಳನ್ನು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶಗಳಲ್ಲಿ ಎಸೆದು ಬರುತ್ತಿದ್ದನು.
ಈ ಜೋಡಿ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಜಗಳವಾಡುತ್ತಿದ್ದರು. ಇದು ಅತಿರೇಕಕ್ಕೆ ಹೋಗಿದ್ದು ಮೇ 18ರ ಸಂಜೆ ಪೂನಾವಾಲಾ ಶ್ರದ್ಧಾ ವಾಕರ್ನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.