ನವದೆಹಲಿ: ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ದೆಹಲಿಯ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲರನ್ನು ಕಳುಹಿಸಲಾಗಿದ್ದು, ಗುರುಗ್ರಾಮ್ ಬಳಿಯ ಕಾಡಿನಿಂದ ಪೊಲೀಸರು ಶ್ರದ್ಧಾಳ ಮತ್ತಷ್ಟು ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರದ್ಧಾ ವಾಲ್ಕರ್ ದೇಹದ ಭಾಗಗಳನ್ನು ಗುರುಗ್ರಾಮ್ ಬಳಿಯ ಕಾಡಿನಲ್ಲಿ ಎಸೆದಿದ್ದೇನೆ ಎಂದು ವಿಚಾರಣೆ ವೇಳೆ ಅಫ್ತಾಬ್ ಹೇಳಿದ ಹಿನ್ನೆಲೆಯಲ್ಲಿ ಆತನನ್ನು ಅಲ್ಲಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿತ್ತು. ನಮಗೆ ಕಪ್ಪು ಪ್ಲಾಸ್ಟಿಕ್ ಚೀಲ ಕಾಣಿಸಿತು. ಅದರಲ್ಲಿ ಮೃತದೇಹದ ಭಾಗಗಳಿದ್ದವು. ಶ್ರದ್ಧಾಳ ತಲೆಯ ಭಾಗಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಅಫ್ತಾಬ್ ನ ಫ್ಲಾಟ್ ನಿಂದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳೆಲ್ಲಾ ಗೃಹೋಪಯೋಗಿ ವಸ್ತುಗಳು. ಶ್ರದ್ಧಾಳನ್ನು ಕೊಲೆ ಮಾಡಲು ಬಳಸಿದ ಆಯುಧಗಳಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಫ್ತಾಬ್ ಕೊಲೆ ಮಾಡುವ ಹೊತ್ತಿಗೆ ಶ್ರದ್ಧಾ ಧರಿಸಿಕೊಂಡಿದ್ದ ಬಟ್ಟೆಯ ಬಗ್ಗೆ ಕೇಳಿದಾಗ ಆತ ಅದನ್ನು ನಗರಪಾಲಿಕೆಯವರು ಕಸ ಸಂಗ್ರಹಿಸಲು ಬರುವ ವ್ಯಾನಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ. ವಾಹನವನ್ನು ಗುರುತು ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ: ಥರ್ಡ್ ಡಿಗ್ರಿ ಬಳಸಬೇಡಿ, 5 ದಿನದಲ್ಲಿ ಅಫ್ತಾಬ್ನ ನಾರ್ಕೋ ಟೆಸ್ಟ್ ಪೂರ್ಣಗೊಳಿಸಿ; ಕೋರ್ಟ್ ಸೂಚನೆ
ಅಫ್ತಾಬ್ ಅಮೀನ್ ಪೂನಾವಾಲಾನನ್ನು ಸ್ಥಳ ಮಹಜರಿಗೆ ಪೊಲೀಸರು ಮೆಹ್ರೌಲಿ ಅರಣ್ಯ ಪ್ರದೇಶಕ್ಕೆ ಕರೆತಂದರು. ಇನ್ನು ಶ್ರದ್ಧಾ ವಾಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತಾ ಹೋದರೆ ಪೊಲೀಸರಿಗೆ ಮತ್ತಷ್ಟು ಸಂಗತಿಗಳು ಬಯಲಿಗೆ ಬರುತ್ತಿದ್ದು, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಹರಿಯಾಣಕ್ಕೆ ಅನೇಕ ಪೊಲೀಸ್ ತಂಡಗಳು ಭೇಟಿ ನೀಡುತ್ತಿವೆ. ಡಿಎನ್ಎ ವಿಶ್ಲೇಷಣೆಗಾಗಿ ಶ್ರದ್ಧಾಳ ತಂದೆ ಮತ್ತು ಸಹೋದರನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇದಹ ಮೂಳೆಗಳು ಶ್ರದ್ಧಾಳದ್ದು ಹೌದೇ ಅಲ್ಲವೇ ಎಂದು ತಿಳಿಯಲು ತಂದೆ ಮತ್ತು ಸಹೋದರನ ರಕ್ತದ ಮಾದರಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.