ಹೈದರಾಬಾದ್: ನಾಲ್ವರು ಟಿಆರ್ಎಸ್ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ನೀಡಿದ್ದ ಎರಡನೇ ನೋಟಿಸ್ ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ತೆಲಂಗಾಣ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಎಸ್ಐಟಿ ಗುರುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಸಂತೋಷ್ ಅವರಿಗೆ ಎರಡನೇ ನೋಟಿಸ್ ಜಾರಿ ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ಸಂತೋಷ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಸುರೇಂದರ್ ಅವರು ನೋಟಿಸ್ ಗೆ ಡಿಸೆಂಬರ್ 5 ರವರೆಗೆ ತಡೆ ನೀಡಿದ್ದಾರೆ.
ಎಸ್ಐಟಿ ಮೊದಲು ನೀಡಿದ ನೋಟಿಸ್ ನಲ್ಲಿ ಯಾವುದೇ ಅಗತ್ಯ ಅಂಶಗಳಿಲ್ಲ. ತರುವಾಯ ನವೆಂಬರ್ 23 ರಂದು ಎರಡನೇ ಬಾರಿಗೆ ನೀಡಿದ ನೋಟಿಸ್ ನಲ್ಲೂ ಯಾವುದೇ ಸಮಂಜಸವಾದ ದೂರು ನೀಡಿದ್ದರೆ ಬಗ್ಗೆ ಅಥವಾ ನಂಬಲರ್ಹವಾದ ಮಾಹಿತಿ ಸ್ವೀಕರಿಸಿದ ಬಗ್ಗೆ ಅಥವಾ ಗುರುತಿಸಬಹುದಾದ ಅಪರಾಧವನ್ನು ಮಾಡಿದ್ದಾರೆ ಎಂಬ ಸಮಂಜಸವಾದ ಮಾಹಿತಿ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸಂತೋಷ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಕಾಶ್ ರೆಡ್ಡಿ, ನೋಟಿಸ್ ನೀಡಿದಾಗ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತನಿಖೆಗೆ ಸಹಕರಿಸಲು ಆರೋಪಿ ವಿರುದ್ಧ ಇರುವ ಸಾಕ್ಷ್ಯಗಳನ್ನು ಸೂಚಿಸಬೇಕು ಎಂದು ವಾದಿಸಿದರು.
ಎಸ್ಐಟಿ ಸಂತೋಷ್ ಅವರಿಗೆ ನೀಡಿದ್ದ ಹೊಸ ನೋಟಿಸ್ನಲ್ಲಿ, ನವೆಂಬರ್ 26 ಅಥವಾ ನವೆಂಬರ್ 28 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.