ದೇಶ

ಗುಜರಾತ್: ಕೇಜ್ರಿವಾಲ್ ನತ್ತ ಪ್ಲಾಸ್ಟಿಕ್ ಬಾಟಲಿ ಎಸೆತ

Nagaraja AB

ರಾಜ್ ಕೋಟ್: ಗುಜರಾತಿನ ರಾಜ್ ಕೋಟ್ ನಗರದಲ್ಲಿ ನಡೆದ ಗರ್ಭಾ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರತ್ತ ಪ್ಲಾಸ್ಟಿಕ್ ನೀರಿನ ಬಾಟಲಿ ಎಸೆಯಲಾಗಿದೆ. ಆದರೆ, ಅದು ಅವರನ್ನು ತಾಗಿಲ್ಲ. ಅವರ ತಲೆ ಪಕ್ಕದಲ್ಲಿ ಹೋಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಭಾನುವಾರ ಹೇಳಿದ್ದಾರೆ.

ಶನಿವಾರ ರಾತ್ರಿ ನವರಾತ್ರಿ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿಂದಿನಿಂದ ಎಎಪಿ ರಾಷ್ಟ್ರೀಯ ಸಂಚಾಲಕರತ್ತ ಬಾಟಲಿ ಎಸೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೂಡಲೇ ಭದ್ರತಾ ಅಧಿಕಾರಿಗಳು ಮತ್ತು ಪಕ್ಷದ ಹಿರಿಯ ಮುಖಂಡರು ಕೇಜ್ರಿವಾಲ್ ಅವರನ್ನು ಸುತ್ತುವರೆದಿದ್ದಾರೆ. 

ಕೆಲ ದೂರದಿಂದ ಬಾಟಲಿ ಎಸೆಯಲಾಗಿದೆ. ಅದು ಕೇಜ್ರಿವಾಲ್ ತಲೆಯತ್ತ ಸಾಗಿದೆ. ಇದಕ್ಕೆಲ್ಲಾ ಪೊಲೀಸರನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ಎಎಪಿ ಮಾಧ್ಯಮ ಸಮನ್ವಯಾಧಿಕಾರಿ ಸುಕಾನ್ ರಾಜ್ ಹೇಳಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರದಿಂದ ಎರಡು ದಿನ ಗುಜರಾತ್ ಭೇಟಿ ನೀಡಿದ್ದಾರೆ. ಭಗವಂತ್ ಮಾನ್ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

SCROLL FOR NEXT