ದೇಶ

ಮಹಾತ್ಮ ಗಾಂಧಿಯಂತೆ ಕಾಣುತ್ತಿದ್ದ ಅಸುರ; ದುರ್ಗಾಪೂಜೆಯ ಆಯೋಜಕರ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಆಗ್ರಹ

Ramyashree GN

ಕೋಲ್ಕತ್ತಾ: ನೈಋತ್ಯ ಕೋಲ್ಕತ್ತಾದಲ್ಲಿ ಮಹಾತ್ಮ ಗಾಂಧಿಯನ್ನು ಹೋಲುವ ಮಹಿಷಾಸುರ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ದುರ್ಗಾ ಪೂಜೆಯನ್ನು ಆಯೋಜಿಸಿದ ಹಿಂದೂ ಮಹಾಸಭಾ ಮುಖಂಡರನ್ನು ತಕ್ಷಣವೇ ಬಂಧಿಸುವಂತೆ ನೆಟಿಜನ್‌ಗಳು ಒತ್ತಾಯಿಸಿದ್ದಾರೆ.

ಅಖಿಲ ಭಾರತೀಯ ಹಿಂದೂ ಮಹಾಸಭಾದ ಸಂಘಟಕರು, ಬೋಳುತಲೆ ಹೊಂದಿದ್ದ ಮತ್ತು ಬಿಳಿ ಧೋತಿ ಮತ್ತು ದುಂಡಗಿನ ಕನ್ನಡಕ ಧರಿಸಿದ್ದ ಮಹಿಷಾಸುರ ವಿಗ್ರಹವು ಮಹಾತ್ಮ ಗಾಂಧಿಯನ್ನು ಹೋಲುತ್ತಿರುವುದು 'ಕಾಕತಾಳೀಯ' ಎಂದು ಹೇಳಿಕೊಂಡಿದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮಹಾತ್ಮ ಗಾಂಧಿಯನ್ನು ಅಸುರನಂತೆ ಬಿಂಬಿಸಿದ ಹಿಂದೂ ಮಹಾಸಭಾದ ಪದಾಧಿಕಾರಿಗಳನ್ನು ಕೂಡಲೇ ಬಂಧಿಸಿ ಎಂದು ಅತಾನು ಚಕ್ರವರ್ತಿ ಎಂಬುವವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ದುರ್ಗಾ ಪೂಜೆಯ ಮಂಟಪದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಕೋಲ್ಕತ್ತಾ ಪೊಲೀಸರು ಮಹಾಸಭಾಗೆ ವಿಗ್ರಹವನ್ನು ಬದಲಾಯಿಸುವಂತೆ ಹೇಳಿದ್ದಾರೆ ಮತ್ತು ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪತ್ರಕರ್ತ ಇಂದ್ರದೀಪ್ ಭಟ್ಟಾಚಾರ್ಯ ಅವರಿಗೆ ಹಬ್ಬದ ನಡುವೆ 'ಉದ್ವೇಗವನ್ನು ಉಂಟುಮಾಡಬಹುದು' ಎಂದು ಅಳಿಸುವಂತೆ ಕೇಳಿದ್ದಾರೆ.

ಕೋಲ್ಕತ್ತಾ ಪೊಲೀಸರ ಕೋರಿಕೆಯ ಮೇರೆಗೆ ವಿಗ್ರಹವನ್ನು ಬದಲಾಯಿಸಿರುವುದಾಗಿ ಹಿಂದೂ ಮಹಾಸಭಾ ಹೇಳಿಕೊಂಡಿದೆ. 'ಅದೇ ವಿಗ್ರಹದ ಮೇಲೆ 'ಮೀಸೆ ಮತ್ತು ತಲೆಗೆ ಕೂದಲನ್ನು ಹಾಕಲಾಗಿದೆ'. ಕೆಪಿ ಎಂತಹ ಸುಲಭ ಪರಿಹಾರ ಕಂಡುಕೊಂಡಿದ್ದಾರೆ ಎಂದು ಉಜ್ಜೈನಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇದು ಸ್ವಾತಂತ್ರ್ಯ ಹೋರಾಟಗಾರರನ್ನು ರಾಕ್ಷಸರನ್ನಾಗಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಆರೋಪಿಸಿದ್ದಾರೆ.

'ಇಲ್ಲ, ಇದು ಕಾಕತಾಳೀಯವಲ್ಲ. ಇದು ನಮ್ಮ ಸ್ವಾತಂತ್ರ್ಯ ಚಳವಳಿಯ ವೀರರನ್ನು ರಾಕ್ಷಸೀಕರಿಸುವ ಪ್ರಸ್ತುತ ನಿರೂಪಣೆಗೆ ತಕ್ಕಂತೆ ಇದರ ರೂಪವನ್ನು ಬದಲಾಯಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಒಂದು ರಾಷ್ಟ್ರವಾಗಿ ನಾವು ನಿಜವಾಗಿಯೂ ನಮ್ಮ ನೈತಿಕ ದಿಕ್ಸೂಚಿಯನ್ನು ಕಳೆದುಕೊಂಡಿದ್ದೇವೆ' ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಪಾರ್ಥ ಪ್ರತಿಮ್ ಭಟ್ಟಾಚಾರ್ಯ ಅವರು ಫೇಸ್‌ಬುಕ್‌ನಲ್ಲಿ, ಈ ವಿಗ್ರಹವು 'ನನ್ನಂತಹ ಅನೇಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ'. ಹೀಗಾಗಿ ದುರ್ಗಾಪೂಜೆಯ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಈ ಉಪದ್ರವವನ್ನು ತಡೆಯಲು ಕಾನೂನು ಜಾರಿ ಮಾಡುವವರು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ. ಇದು ನಮಗೆ, ನಿರ್ದಿಷ್ಟವಾಗಿ ಭಾರತೀಯರು ಮತ್ತು ಬೆಂಗಾಲಿಗಳಿಗೆ ನಾಚಿಕೆಗೇಡಿನ ಸಂಗತಿ' ಎಂದು ಕುಮಾರ್ ಮುಖರ್ಜಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಇದು ನನ್ನ ನಗರಕ್ಕೆ ತುಂಬಾ ಅವಮಾನ!' ಎಂದು ದ್ವೈಪಯನ್ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.
ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ, 'ಸಂಘಟನೆಯು ಯಾರ ಭಾವನೆಗಳಿಗೂ ಧಕ್ಕೆ ತರಲು ಬಯಸುವುದಿಲ್ಲ' ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

SCROLL FOR NEXT