ಪಾಟ್ನಾ: ಕೇವಲ 20 ವರ್ಷಗಳ ಹಿಂದೆ ರಾಜಕೀಯ ಜೀವನ ಆರಂಭಿಸಿದ ಅಮಿತ್ ಶಾ ಅವರ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮರ್ ಹೇಳಿದ್ದಾರೆ.
ಬಿಹಾರದ ಸರನ್ ಜಿಲ್ಲೆಯಲ್ಲಿ ಜಯಪ್ರಕಾಶ ನಾರಾಯಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿರುವ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಜಯಪ್ರಕಾಶ ನಾರಾಯಣ ಅವರ ಶಿಷ್ಯರೆಂದು ಹೇಳಿಕೊಳ್ಳುವವರು, ಅವರ ಸಮಾಜವಾದಿ ಸಿದ್ಧಾಂತವನ್ನು ಮರೆತು ಬಿಟ್ಟಿದ್ದಾರೆ ಎಂದು ಬಿಹಾರದ ಮಹಾಘಟಬಂಧನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಪೋಷಕರನ್ನು ನಿಂದಿಸಿದರೂ ಪರವಾಗಿಲ್ಲ, ಮೋದಿ, ಅಮಿತ್ ಶಾರನ್ನು ನಿಂದಿಸಬಾರದು: ಚಂದ್ರಕಾಂತ್ ಪಾಟೀಲ್ ವಿವಾದಾಸ್ಪದ ಹೇಳಿಕೆ
'ನಿತೀಶ್ ಹಾಗೂ ಲಾಲೂ ಅವರಿಗೆ ಅಧಿಕಾರದ ಹಸಿವಿದೆ. ಅವರು ಅಧಿಕಾರಕ್ಕಾಗಿ ಜೆಪಿ ಸಿದ್ಧಾಂತಗಳನ್ನು ತೊರೆದಿದ್ದಾರೆ. ಆ ಮೂಲಕ ಕಾಂಗ್ರೆಸ್ನೊಂದಿಗೆ ಕೈಜೋಡಿಸಿದ್ದಾರೆ. ಈಗ ಅವರಿಗೆ ಜೆಪಿ ಪ್ರತಿಪಾದಿಸಿದ ಸಿದ್ಧಾಂತಗಳೊಂದಿಗೆ ಯಾವುದೇ ಸಂಬಂಧವಿಲ್ಲ' ಎಂದು ತಿಳಿಸಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಸಮಾಜದ ದುರ್ಬಲ ವರ್ಗಗಳ ಏಳ್ಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ವರ್ಗಗಳ ಪರವಾಗಿ ಜೆಪಿ ನಿಂತಿದ್ದರು. ಬಡವರ ಬಗ್ಗೆ ಕಾಳಜಿ ಹೊಂದಿದ್ದರು' ಎಂದು ಶಾ ಹೇಳಿದ್ದರು.
ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ದೆಹಲಿಯ ಪ್ರಮುಖ ಆಂಗ್ಲ ಪತ್ರಿಕೆಗಳು ನನ್ನ ವಿರುದ್ಧ ಅಮಿತ್ ಶಾ ನೀಡಿದ ಹೇಳಿಕೆಗಳನ್ನು ಹೈಲೈಟ್ ಮಾಡಿ ಬರೆದಿವೆ ಎಂದರು, ಯಾರು ಅವರು, ನೀವು ಯಾರ ಬಗ್ಗೆ ಕೇಳುತ್ತಿದ್ದೀರಾ ಎಂದು ನೀತೀಶ್ ಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದರು.