ದೇಶ

ಕೇಂದ್ರಕ್ಕೆ ಮತ್ತೆ 'ಸ್ವಾಮಿ' ಸಂಕಷ್ಟ; ಬ್ಯಾಂಕಿಂಗ್ ಹಗರಣಗಳ ಸಂಬಂಧ ಸಿಬಿಐ, ಆರ್‌ಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ!

Srinivasamurthy VN

ನವದೆಹಲಿ: ಕೇಂದ್ರದ ಮೋದಿ ಸರ್ಕಾರಕ್ಕೆ ಮತ್ತೆ ತಮ್ಮದೇ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯೊಂದು ಸಂಕಷ್ಟ ತಂದೊಡ್ಡಿದ್ದು, ಬ್ಯಾಂಕಿಂಗ್ ಹಗರಣಗಳ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ), ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಪ್ರತಿಕ್ರಿಯೆ ಕೇಳಿದೆ.

ವಿವಿಧ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಆರ್‌ಬಿಐ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ಸತ್ಯ ಸಬರ್ವಾಲ್ ಅವರು ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ. 

ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದೆ. ಅಲ್ಲದೆ ಈ ಸಂಬಂಧ ಪ್ರತಿಕ್ರಿಯೆ ಕೇಳಿ ಸಿಬಿಐ ಮತ್ತು ಆರ್ ಬಿಐಗೆ ನೋಟಿಲ್ ಜಾರಿ ಮಾಡಿದೆ. 
 
ಕಳೆದೆರಡು ವರ್ಷಗಳಲ್ಲಿ ಆರ್‌ಬಿಐ ಮತ್ತು ಇತರ ಏಜೆನ್ಸಿಗಳಿಂದ ಪತ್ತೆಯಾದ ಬ್ಯಾಂಕಿಂಗ್ ವಂಚನೆಗಳ ಸಂಖ್ಯೆ ಮತ್ತು ಮೌಲ್ಯವು ವ್ಯಾಪಕವಾಗಿ ಹೆಚ್ಚುತ್ತಿದ್ದರೂ, ಠೇವಣಿದಾರರು ಸೇರಿದಂತೆ ವಿವಿಧ ಪಾಲುದಾರರ, ಹೂಡಿಕೆದಾರರು ಮತ್ತು ಷೇರುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಆರ್‌ಬಿಐ ವಿಫಲವಾಗಿದೆ ಎಂದು ಸ್ವಾಮಿ ಮತ್ತು ವಕೀಲ ಸತ್ಯ ಸಬರ್ವಾಲ್ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಇದು ಭಾರತದ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾಗಿದೆ. ನಿಯಂತ್ರಕ (ಆರ್‌ಬಿಐ) ಬ್ಯಾಂಕ್ ವಂಚನೆಗಳ ಸರಣಿಯ ಬಗ್ಗೆ ಈಗ ಉದಾಸೀನ ಮಾಡುತ್ತಿದೆ ಮತ್ತು ಅದರ ಬಗ್ಗೆ ಈಗ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಅಲ್ಲದೆ ಈ ಕೆಳಗಿನ ಹಗರಣಗಳಿಗೆ ಸಂಬಂಧಿಸಿದಂತೆ ಅಂದರೆ, 'ಕಿಂಗ್‌ಫಿಷರ್ ಹಗರಣ; ಬ್ಯಾಂಕ್ ಆಫ್ ಮಹಾರಾಷ್ಟ್ರ ಹಗರಣ; ಉತ್ತರ ಪ್ರದೇಶ ಮೂಲದ ಖಾಸಗಿ ಸಕ್ಕರೆ ಸಂಸ್ಥೆ ಹಗರಣ; ನೀರವ್ ಮೋದಿ/ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ; IL&FS ಹಗರಣ; ಪಿಎಂಸಿ ಬ್ಯಾಂಕ್ ಹಗರಣ; ಯೆಸ್ ಬ್ಯಾಂಕ್ ಹಗರಣ; ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಗರಣ; ರೋಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಹಗರಣ; ಫಸ್ಟ್ ಲೀಸಿಂಗ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಹಗರಣಗಳ ಕುರಿತು ಆರ್‌ಬಿಐ ಅಧಿಕಾರಿಗಳ ಮೇಲೆ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದೆ.

SCROLL FOR NEXT