ದೇಶ

ಸಾಲ ಮರುಪಾವತಿ ಮಾಡದ್ದಕ್ಕೆ ಉಗ್ರ ಶಿಕ್ಷೆ: ಯುವಕನನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಕಿಡಿಗೇಡಿಗಳು!

Srinivas Rao BV

ಕಟಕ್: ಯುವಕನೋರ್ವನನ್ನು ದ್ವಿಚಕ್ರವಾಹನಕ್ಕೆ ಕಟ್ಟಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಎಳೆದೊಯ್ದಿರುವ ಘಟನೆ ಕಟಕ್ ನಲ್ಲಿ ನಡೆದಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಮೂಡಿದೆ. ಯುವಕನನ್ನು ಕಟ್ಟಿ ಹಾಕಿ ಎಳೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗತೊಡಗಿದ್ದು, 2 ಕಿ.ಮೀ ವರೆಗೂ ಯುವಕನನ್ನು ಎಳೆದೊಯ್ಯಲಾಗಿದೆ. 

ಸ್ಥಳೀಯರು ಈ ಕೃತ್ಯವನ್ನು ತಡೆಯಲು ಯತ್ನಿಸಿದರಾದರೂ, ದ್ವಿಚಕ್ರವಾಹನದಲ್ಲಿದ್ದ ಮಂದಿ ಮುಂದಾಗುವ ಪರಿಣಾಮಗಳ ಬಗ್ಗೆ ಬೆದರಿಕೆ ಹಾಕಿ ಈ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ. 

ಯುವಕನನ್ನು ಎಳೆದೊಯ್ದ ಮಾರ್ಗದಲ್ಲಿ ಮೂರು ಟ್ರಾಫಿಕ್ ಪೋಸ್ಟ್ ಗಳಿದ್ದು, ಈ ಘಟನೆ ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಅಚ್ಚರಿಯೆಂದರೆ ಯಾವುದೇ ಪೊಲೀಸ್ ಗಸ್ತು ತಂಡ ಅಥವಾ ಸ್ಥಳೀಯ ಪೊಲೀಸರೂ ಈ ಕೃತ್ಯವನ್ನು ತಡೆಯಲು ಮುಂದಾಗಿಲ್ಲ. ಮಾನವ ಹಕ್ಕುಗಳ ಕಾರ್ಯಕರ್ತರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಸಿಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ, ಸಿಸಿಟಿವಿ ಕ್ಯಾಮರಾಗಳು, ನಿಯಂತ್ರಣ ಕೊಠಡಿಯ ಮೂಲಕ ನಗರದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿರುವುದಾಗಿ ಹೇಳುತ್ತಾರೆ. ಆದರೆ ಪೊಲೀಸ್ ನಿಯಂತ್ರಣ ಕೊಠಡಿಯಾಗಲೀ, ಟ್ರಾಫಿಕ್ ಸಿಬ್ಬಂದಿಗಳಾಗಲೀ ತಡೆಯಲಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕಟಕ್ ಡಿಸಿಪಿ ಪಿನಾಕ್ ಮಿಶ್ರಾ ಮಾತನಾಡಿದ್ದು, ವೀಡಿಯೋ ಆಧಾರದಲ್ಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT