ದೇಶ

ಟಿಆರ್ ಎಸ್ ಶಾಸಕರ ಖರೀದಿ ಪ್ರಕರಣ: ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ

Lingaraj Badiger

ಹೈದರಾಬಾದ್: ತನ್ನ ವಿರುದ್ಧದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರ ಖರೀದಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ವಹಿಸಬೇಕು ಅಥವಾ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸುವಂತೆ ಕೋರಿ ತೆಲಂಗಾಣ ಬಿಜೆಪಿ ಗುರುವಾರ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜುಲ ಪ್ರೇಮೇಂದ್ರ ರೆಡ್ಡಿ ಅವರು ಈ ಸಂಬಂಧ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಯುತ ತನಿಖೆಗಾಗಿ ಪ್ರಕರಣವನ್ನು ಸಿಬಿಐ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಪಕ್ಷದ ನಾಯಕರನ್ನು ಬಂಧಿಸುವ ಏಕೈಕ ಉದ್ದೇಶದಿಂದ ತೆಲಂಗಾಣ ಸರ್ಕಾರ ಪಕ್ಷಪಾತ ಮತ್ತು ಅನ್ಯಾಯದ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಹಣ ಮತ್ತು ಇತರೆ ಒಪ್ಪಂದಗಳ ಆಮಿಷವೊಡ್ಡಿ ತಮ್ಮ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಟಿಆರ್‌ಎಸ್ ಆರೋಪಿಸಿದ ಒಂದು ದಿನದ ನಂತರ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿದೆ.

ಟಿಆರ್‌ಎಸ್ ಶಾಸಕರ ಖರೀದಿ ಬಗ್ಗೆ ಮಾಹಿತಿ ನೀಡಿದ ನಂತರ ತೆಲಂಗಾಣ ಪೊಲೀಸರು ಬುಧವಾರ ಸಂಜೆ ರಂಗಾ ರೆಡ್ಡಿಯ ಫಾರ್ಮ್‌ಹೌಸ್‌ನಲ್ಲಿ ಮೂವರನ್ನು ಬಂಧಿಸಿದ್ದಾರೆ.

ಮೂವರು ಆರೋಪಿಗಳನ್ನು ರಾಮಚಂದ್ರ ಭಾರತಿ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂದು ಗುರುತಿಸಲಾಗಿದ್ದು, ಇವರು ಬಿಜೆಪಿಗೆ ಸೇರಿದವರು ಎಂದು ಆರೋಪಿಸಲಾಗಿದೆ.

SCROLL FOR NEXT