ದೇಶ

'ಅಮ್ಮಾ, ಜಗತ್ತು ಏನು ಬೇಕಾದರೂ ಹೇಳಿಕೊಳ್ಳಲಿ, ನೀವು ಪ್ರೀತಿಗಾಗಿ ಎಲ್ಲವನ್ನೂ ಮಾಡಿದ್ದೀರಿ; ದಣಿವರಿಯದೇ ದುಡಿದಿದ್ದೀರಿ'

Shilpa D

ನವದೆಹಲಿ: ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ ಕೆಲವೇ ಗಂಟೆಗಳಲ್ಲಿ, ಅವರ ಪುತ್ರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾವನಾತ್ಮಕ ಪೋಸ್ಟ್‌  ಹಾಕಿದ್ದಾರೆ.

ಪಕ್ಷ ಸಂಘಟನೆಯಲ್ಲಿ ತಾಯಿಯ ಪಾತ್ರವನ್ನು ಕೊಂಡಾಡಿರುವ ಪ್ರಿಯಾಂಕಾ, ಎಲ್ಲವನ್ನು ಪ್ರೀತಿಗಾಗಿ ಮಾಡಿದ ನಿಮ್ಮ ಸೇವೆಯನ್ನು ಕಾಂಗ್ರೆಸ್‌ ಪಕ್ಷ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಅಮ್ಮಾ, ಜಗತ್ತು ಏನು ಬೇಕಾದರೂ ಹೇಳಿಕೊಳ್ಳಲಿ, ಅಥವಾ ಜಗತ್ತು ಏನು ಬೇಕಾದರೂ ಯೋಚಿಸಲಿ, ಆದರೆ ನನಗೆ ಗೊತ್ತು. ನೀವು ಪ್ರೀತಿಗಾಗಿ ಎಲ್ಲವನ್ನೂ ಮಾಡಿದ್ದೀರಿ." ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಾಯಿ ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿ ಭಾವನಾತ್ಮಕ ಪೋಸ್ಟ್‌ ಮಾಡಿದ್ದಾರೆ.

ಪಕ್ಷಕ್ಕಾಗಿ ನೀವು ಹಲವಾರು ವರ್ಷಗಳಿಂದ ದಣಿವರಿಯದೇ ದುಡಿದಿದ್ದೀರಿ. ವೈಯಕ್ತಿಕ ಜೀವನದ ನೋವನ್ನು ಎಂದಿಗೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳದೇ, ಸದಾ ನಗುಮುಖದಿಂದಲೇ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೀರಿ. ಪಕ್ಷಕ್ಕಾಗಿ ನೀವು ಮಾಡಿರುವ ಸೇವೆಯನ್ನು ನಾವು ಸದಾ ಸ್ಮರಿಸುತ್ತೇವೆ ಎಂದು ಸೋನಿಯಾ ಗಾಂಧಿ ಅವರನ್ನು ಕುರಿತು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ನಿಮ್ಮ ನಾಯಕತ್ವದಲ್ಲಿ ಪಕ್ಷವು ಅತ್ಯಂತ ಸದೃಢವಾಗಿ ಬೆಳೆದಿದೆ. ಎರಡು ಬಾರಿ ಸರ್ಕಾರ ರಚಿಸಿ ದೇಶದ ಪ್ರಗತಿಗೆ ಕೊಡುಗೆ ನೀಡಿದೆ. ಪಕ್ಷವು ಇನ್ನು ಮುಂದೆಯೂ ನಿಮ್ಮ ಮಾರ್ಗದರ್ಶನದಲ್ಲಿ ದೇಶದ ಒಳಿತಿಗಾಗಿ ದುಡಿಯಲಿದೆ. ನೀವು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಅವರು ಸೋನಿಯಾ ಗಾಂಧಿ ಅವರಿಗೆ ವಾಗ್ದಾನ ಮಾಡಿರುವುದು ಗಮನ ಸೆಳೆದಿದೆ.

ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳು ಹೊರಿಸುವ ಕುಟುಂಬ ರಾಜಕಾರಣದ ಆರೋಪವನ್ನು ಅಲ್ಲಗಳೆಯಲೆಂದೇ, ಸೋನಿಯಾ ಗಾಂಧಿ ಸೇರಿದಂತೆ ಗಾಂಧಿ ಪರಿವಾರದ ಯಾರೊಬ್ಬರೂ ಈ ಬಾರಿಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆದರೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖರ್ಗೆ ಅವರನ್ನು, ಗಾಂಧಿ ಪರಿವಾರದ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ.

ಬರೋಬ್ಬರಿ 24 ವರ್ಷಗಳ ಬಳಿಕ, ಕಾಂಗ್ರೆಸ್‌ ಪಕ್ಷಕ್ಕೆ ಗಾಂಧಿಯೇತರ ಅಧ್ಯಕ್ಷರು ದೊರಕಿದ್ದು, ಖರ್ಗೆ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಗತವೈಭವವನ್ನು ಮರಳಿ ಪಡೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.

1991ರಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ್‌ ಗಾಂಧಿ ಅವರ ಹತ್ಯೆಯಾದ ಬಳಿಕ, ಸೋನಿಯಾ ಗಾಂಧಿ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. 1998ರಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಸೋನಿಯಾ ಗಾಂಧಿ ನಿರಂತರವಾಗಿ ಪಕ್ಷದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು. ಅಂತಿಮವಾಗಿ ಕಾಲದ ಕರೆಗೆ ಓಗೊಟ್ಟು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಗಾಂಧಿ ಹಸ್ತಾಂತರಿಸಿದ್ದಾರೆ. ,ಈಗ ನಾನು ನಿರಾಳವಾಗಿದ್ಧೇನೆ ಎಂದು ಸೋನಿಯಾ ಗಾಂಧಿ ಹೇಳಿರುವುದು ಗಮನ ಸೆಳೆದಿದೆ.

SCROLL FOR NEXT