ದೇಶ

ಜನರು ದಾರಿತಪ್ಪುವುದಿಲ್ಲ; ಯುಸಿಸಿ ಕಾನೂನುಗಳನ್ನು ಜಾರಿಗೆ ತರಲು ರಾಜ್ಯಕ್ಕೆ ಅಧಿಕಾರವಿಲ್ಲ: ಕಾಂಗ್ರೆಸ್

Vishwanath S

ಅಹಮದಾಬಾದ್: ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿ ರಚಿಸುವ ಬಿಜೆಪಿ ಸರ್ಕಾರದ ನಿರ್ಧಾರದಿಂದ ಜನರು ದಾರಿ ತಪ್ಪುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಹೇಳಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ಇದೊಂದು ಗಿಮಿಕ್‌ ಎಂದು ಬಣ್ಣಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಅರ್ಜುನ್‌ ಮೊದ್‌ವಾಡಿಯಾ, ಇಂತಹ ಕಾನೂನು ರೂಪಿಸುವ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇಲ್ಲ ಎಂದಿದ್ದಾರೆ.

ಭೂಪೇಂದ್ರ ಪಟೇಲ್ ಸರ್ಕಾರವು ಯುಸಿಸಿಯನ್ನು ಅನುಷ್ಠಾನಗೊಳಿಸುವ ವಿಧಾನಗಳನ್ನು ಅಧ್ಯಯನ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಎಂದು ಹಿಂದಿನ ದಿನ ಘೋಷಿಸಿತು.

'ಸರ್ಕಾರದ ವೈಫಲ್ಯದಿಂದಾಗಿ ಹಣದುಬ್ಬರ, ನಿರುದ್ಯೋಗ ಮತ್ತು ಇತರ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರನ್ನು ದಾರಿ ತಪ್ಪಿಸುವ ಗುರಿಯನ್ನು ಈ ಗಿಮಿಕ್ ಹೊಂದಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ ಎಂದು ಹೇಳಿದರು.

'ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಎಂಟು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ನಿರ್ಧಾರಕ್ಕೆ ಅರ್ಥವಿಲ್ಲ ಎಂದು ಅವರು ಹೇಳಿದರು.

ಯುವಕರು, ರೈತರು, ದನಗಾಹಿಗಳು ಮತ್ತು ಸಮಾಜದ ಇತರ ಎಲ್ಲ ವರ್ಗಗಳನ್ನು ಹತಾಶರನ್ನಾಗಿಸಿರುವ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿರುವುದರಿಂದ ಬಿಜೆಪಿ ಈ 'ತಂತ್ರ'ವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

SCROLL FOR NEXT