ದೇಶ

ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಅಂಗೀಕಾರ; ಆಪರೇಷನ್ ಕಮಲ ಫೇಲ್ ಎಂದ ಕೇಜ್ರಿವಾಲ್

Lingaraj Badiger

ನವದೆಹಲಿ: ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದ ವಿಶ್ವಾಸಮತ ಯಾಚನೆ ನಿರ್ಣಯವನ್ನು ಗುರುವಾರ ಸದನದಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.

ವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಜ್ರಿವಾಲ್, ನಮ್ಮ ಪಕ್ಷ "ಹಾರ್ಡ್ ಕೋರ್ ಪ್ರಾಮಾಣಿಕ" ಪಕ್ಷವಾಗಿದ್ದು, ಯಾವುದೇ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 40 ಎಎಪಿ ಶಾಸಕರನ್ನು ಖರೀದಿಸಲು ಪ್ರಯತ್ನಿಸಿತ್ತು ಎಂದು ದೆಹಲಿ ಸಿಎಂ ಆರೋಪಿಸಿದರು.

ಪ್ರಸ್ತುತ ಕೆನಡಾದಲ್ಲಿರುವ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಜೈಲಿನಲ್ಲಿರುವ ಸತ್ಯೇಂದರ್ ಜೈನ್ ಮತ್ತು ಆಸ್ಟ್ರೇಲಿಯಾದಲ್ಲಿರುವ ನರೇಶ್ ಬಲ್ಯಾನ್ ಅವರನ್ನು ಹೊರತುಪಡಿಸಿ ಇತರ ಎಲ್ಲಾ 59 ಶಾಸಕರು ಇಂದು ಸದನದಲ್ಲಿ ಹಾಜರಿದ್ದು, ವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರು ಎಂದು ಸಿಎಂ ತಿಳಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ವಿಫಲವಾಗಿದೆ ಎಂಬುದು ಈಗ ಸಾಬೀತಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದ್ದರೆ ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ.

ಬಿಜೆಪಿ ತನ್ನ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದ ನಂತರ ಕೇಜ್ರಿವಾಲ್ ಅವರು ಸದನದಲ್ಲಿ ವಿಶ್ವಾಸ ನಿರ್ಣಯ ಮಂಡಿಸಿದ್ದರು. 

ಅಬಕಾರಿ ನೀತಿಯ ಕುರಿತು ನಡೆಯುತ್ತಿರುವ ಸಿಬಿಐ ತನಿಖೆ ಮತ್ತು ಬಿಜೆಪಿ 'ಆಪರೇಷನ್ ಕಮಲ'ದ ಅಡಿಯಲ್ಲಿ ಶಾಸಕರ ಖರೀದಿ ಯತ್ನ ವಿಚಾರಗಳ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು.

ಸದನದಲ್ಲಿ ಹಾಜರಿದ್ದ ಎಲ್ಲಾ 59 ಶಾಸಕರು ವಿಶ್ವಾಸ ನಿರ್ಣಯವನ್ನು ಬೆಂಬಲಿಸಿದ್ದಾರೆ. ಯಾರೂ ವಿರೋಧ ವ್ಯಕ್ತಪಡಿಸಿದ ಕಾರಣ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಉಪ ಸ್ಪೀಕರ್ ರಾಖಿ ಬಿರ್ಲಾ ಘೋಷಿಸಿದರು. ಬಳಿಕ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

SCROLL FOR NEXT