ದೇಶ

ಶಾಸಕ ಸ್ಥಾನದಿಂದ ಅನರ್ಹತೆ ಕುರಿತ ವರದಿ ಸೋರಿಕೆಯಿಂದ ಆಘಾತ: ಜಾರ್ಖಂಡ್ ರಾಜ್ಯಪಾಲರಿಗೆ ಯುಪಿಎ ನಿಯೋಗ

Lingaraj Badiger

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಕುರಿತು ‘ಕೆಲವು ಆಯ್ದ ವಿಷಯಗಳನ್ನು ಸೋರಿಕೆ’ಮಾಡಿರುವುದು ಆಘಾತಕಾರಿ ಎಂದು ಗುರುವಾರ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಭೇಟಿ ಮಾಡಿದ ಯುಪಿಎ ನಿಯೋಗ ತಿಳಿಸಿದೆ.

ಇಂತಹ ಸೋರಿಕೆಗಳು ಅವ್ಯವಸ್ಥೆ, ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿವೆ ಎಂದು ರಾಜ್ಯಪಾಲ ಬೈಸ್‌ಗೆ ನೀಡಿದ ಮನವಿಯಲ್ಲಿ ಯುಪಿಎ ನಿಯೋಗ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ವಿಚಾರದ ಬಗ್ಗೆ ಚುನಾವಣಾ ಆಯೋಗದ ತೀರ್ಪಿನ ಗೊಂದಲವನ್ನು ನಿವಾರಿಸುವಂತೆ ನಿಯೋಗ ರಾಜ್ಯಪಾಲರಿಗೆ ಕೇಳಿಕೊಂಡಿದೆ.

ಸೊರೆನ್ ಅವರ ಭವಿಷ್ಯದ ಕುರಿತಾದ ಊಹಾಪೋಹಗಳು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ಅಸ್ಥಿರತೆಗೆ ಉತ್ತೇಜನ ನೀಡಿವೆ ಎಂದು ನಿಯೋಗ ಹೇಳಿದೆ.

81 ಸದಸ್ಯರ ಸದನದಲ್ಲಿ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಸರ್ಕಾರ ಸಂಪೂರ್ಣ ಬಹುಮತವನ್ನು ಹೊಂದಿರುವುದರಿಂದ, ಸಿಎಂ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಿಕೆಯು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿಯೋಗ ಪ್ರತಿಪಾದಿಸಿದೆ.

ಲಾಭದಾಯಕ ಹುದ್ದೆ ಹೊಂದಿದ ಪ್ರಕರಣದಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಬಿಜೆಪಿ ಮನವಿ ಮಾಡಿದ ನಂತರ, ಚುನಾವಣಾ ಆಯೋಗವು ಆಗಸ್ಟ್ 25 ರಂದು ತನ್ನ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಿದೆ.

ಸೊರೆನ್ ಅವರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲವಾದರೂ, ಚುನಾವಣಾ ಸಮಿತಿಯು ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಶಿಫಾರಸು ಮಾಡಿದೆ ಎಂಬ ವದಂತಿ ಇದೆ.

SCROLL FOR NEXT