ದೇಶ

'ಬುಲ್ಡೋಜರ್ ರಾಜ್' ನಿಲ್ಲಿಸಿ, ದೇಶ ವಿರೋಧಿಗಳನ್ನು ಕಾನೂನಾತ್ಮಕವಾಗಿ ಎದುರಿಸಿ: ಅಸ್ಸಾಂ ಸಂಸದ

Lingaraj Badiger

ಗುವಾಹಟಿ: ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ "ಬುಲ್ಡೋಜರ್ ರಾಜ್" ಅನ್ನು ನಿಲ್ಲಿಸಬೇಕು ಮತ್ತು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವವರನ್ನು ಕಾನೂನಾತ್ಮಕವಾಗಿ ಎದುರಿಸಿ ಎಂದು ಅಸ್ಸಾಂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ಒತ್ತಾಯಿಸಿದ್ದಾರೆ.

"ಯಾರಾದರೂ ಏನಾದರೂ ತಪ್ಪು ಮಾಡುತ್ತಿರುವುದು ಕಂಡುಬಂದರೆ, ಕಾನೂನಿನ ಮೂಲಕ ಶಿಕ್ಷೆ ನೀಡಿ. ಅವರನ್ನು ಬಂಧಿಸಿ, ಜೈಲಿನಲ್ಲಿಡಿ ಅಥವಾ ಗಲ್ಲಿಗೇರಿಸಿ. ನಮಗೆ ಹೇಳಲು ಏನೂ ಇರುವುದಿಲ್ಲ. ಆದರೆ ಈ ಬುಲ್ಡೋಜರ್ ರಾಜ್ ಅನ್ನು ಮೊದಲು ನಿಲ್ಲಿಸಿ ”ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಮುಖ್ಯಸ್ಥ ಅಜ್ಮಲ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮದರಸಾಗಳನ್ನು ಸಾರ್ವಜನಿಕ ಆಸ್ತಿ ಎಂದು ಹೇಳಿ ಕೆಡವಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಅಜ್ಮಲ್ ಒತ್ತಾಯಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಇಸ್ಲಾಮಿಕ್ ಮೂಲಭೂತವಾದಿಳಿಗೆ ಆಶ್ರಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬುಲ್ಡೋಜರ್‌ಗಳನ್ನು ಬಳಸಿ ಮೂರು ಮದರಸಾಗಳನ್ನು ನೆಲಸಮಗೊಳಿಸಿದೆ. ಅವುಗಳಲ್ಲಿ ಕೆಲವು ಬಾಂಗ್ಲಾದೇಶಿ ಪ್ರಜೆಗಳಿಗೆ ಆಶ್ರಯ ನೀಡಿದ ಆರೋಪ ಇದೆ.

ರಾಜಕೀಯಕ್ಕಾಗಿ ಮದರಸಾಗಳ ಧ್ವಂಸಗೊಳಿಸಲಾಗುತ್ತಿದೆ. 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಕ್ರಮ ಕೈಗೊಳ್ಳುತ್ತಿದೆ ಎಂಬುದು ಖಚಿತ ಎಂದು ಅಜ್ಮಲ್ ಹೇಳಿದ್ದಾರೆ.

SCROLL FOR NEXT