ಅಹಮದಾಬಾದ್: “ಬಿಜೆಪಿ 277 ಶಾಸಕರನ್ನು ಖರೀದಿಸಲು 6,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಅಲ್ಲದೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕರನ್ನು ಖರೀದಿಸಲು ಯತ್ನಿಸಿದರು ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್ ಅವರು ಇಂದು ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ರೈತರಿಗೆ ಇನ್ನೂ ಐದು ಭರವಸೆಗಳನ್ನು ಘೋಷಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, "ನಿಮಗೆ ಉಚಿತ ವಿದ್ಯುತ್ ಮತ್ತು ಉಚಿತ ಶಿಕ್ಷಣ ಬೇಕಾದರೆ ನಮಗೆ ಮತ ನೀಡಿ. ನಿಮಗೆ ಭ್ರಷ್ಟಾಚಾರ ಮತ್ತು 'ಗುಂಡಾಗಿರಿ' ಬೇಕಾದರೆ ಅವರಿಗೆ ಮತ ನೀಡಿ" ಎಂದು ಹೇಳಿದರು.
ಇದನ್ನು ಓದಿ: ಸಿಸೋಡಿಯಾ ಮೇಲೆ ಸಿಬಿಐ ದಾಳಿ ನಂತರ ಗುಜರಾತ್ನಲ್ಲಿ ಎಎಪಿ ಮತಗಳು ಶೇ. 4 ರಷ್ಟು ಹೆಚ್ಚಾಗಿದೆ: ಕೇಜ್ರಿವಾಲ್
ಗುಜರಾತ್ನಲ್ಲಿ ಮತ್ತೊಂದು ಚುನಾವಣಾ ಪೂರ್ವ ಭರವಸೆಯಲ್ಲಿ ಕೇಜ್ರಿವಾಲ್ ಅವರು, ರೈತರಿಗೆ 2 ಲಕ್ಷ ರೂಪಾಯಿಗಳ ಸಾಲ ಮನ್ನಾ, ಹಗಲಿನಲ್ಲಿ 12 ಗಂಟೆಗಳ ಕಾಲ ಉಚಿತ ವಿದ್ಯುತ್, ಕನಿಷ್ಠ ಬೆಂಬಲ ಬೆಲೆ(MSP) ಸೇರಿದಂತೆ ಐದು ಅಂಶಗಳ ಪ್ರಣಾಳಿಕೆಯನ್ನು ಘೋಷಿಸಿದರು. ಅಲ್ಲದೆ ಬೆಳೆ ವಿಫಲವಾದಲ್ಲಿ ಪ್ರತಿ ಎಕರೆ ಭೂಮಿಗೆ ರೂ 20,000 ಪರಿಹಾರ ನೀಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದರು.