ದೇಶ

ಕಾಂಗ್ರೆಸ್ ನಾಯಕರು ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ: ಜೈರಾಂ ರಮೇಶ್

Nagaraja AB

ನವದೆಹಲಿ: ಕಾಂಗ್ರೆಸ್ ಪಕ್ಷ ಪ್ರಜಾಸತಾತ್ಮಕ, ಒಗ್ಗಟ್ಟಿನ ಪಕ್ಷವಾಗಿದ್ದು, ತನ್ನ ನಾಯಕರು ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ ಎಂದು ಪಕ್ಷ ಸೋಮವಾರ ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಮತ್ತು ಬಿಜೆಪಿಯ ಟೀಕೆಗಳನ್ನು ನಿರಾಕರಿಸಿದೆ. 

'ಭಾರತ್ ಜೋಡೋ ಮುನ್ನ ಕಾಂಗ್ರೆಸ್ ಜೋಡೋ' ಕೈಗೊಳ್ಳಬೇಕು ಎಂದು ಗುಲಾಂ ನಬಿ ಆಜಾದ್ ಹೇಳಿಕೆ ಹಾಗೂ ಬಿಜೆಪಿ ಟೀಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಪಕ್ಷ ಸದೃಢವಾಗಿದ್ದು, ಒಗ್ಗಟ್ಟಿನಿಂದ ಇದೆ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ಅತೃಪ್ತರಾದವರು ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ, ಈಗ ಪಕ್ಷದಲ್ಲಿ ಒಗ್ಗಟ್ಟು ಇದೆ. ನಿನ್ನೆ ನಡೆದ ರ್‍ಯಾಲಿ ಯಶಸ್ವಿಯಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನು ಬದ್ಧನಾಗಿದ್ದು, ಉತ್ಸಾಹ, ಶಕ್ತಿ ಇದೆ ಮತ್ತು ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುವುದು ನಮ್ಮ ಏಕೈಕ ಗುರಿಯಾಗಿದೆ ಎಂದು ರಮೇಶ್ ಸುದ್ದಿಗಾರರಿಗೆ ತಿಳಿಸಿದರು.

"ಕಾಂಗ್ರೆಸ್ ಒಂದು ದೊಡ್ಡ ಕುಟುಂಬ ಮತ್ತು ವಿಭಿನ್ನ ದೃಷ್ಟಿಕೋನಗಳ ಜನರಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ಪಕ್ಷ, ಜನರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುತ್ತಾರೆ. ಕೆಲವರು ಪತ್ರಗಳನ್ನು ಬರೆಯುತ್ತಾರೆ, ಕೆಲವರು ಟ್ವೀಟ್ ಮಾಡುತ್ತಾರೆ, ಕೆಲವರು ಸಂದರ್ಶನ ನೀಡುತ್ತಾರೆ - ಮತ್ತು ಇದು ಪ್ರಜಾಪ್ರಭುತ್ವವನ್ನು ತೋರಿಸುತ್ತದೆ. ಸರ್ವಾಧಿಕಾರವಿಲ್ಲ. ನಮ್ಮ ಪಕ್ಷದಲ್ಲಿ ನಾವು ಯಾರನ್ನೂ ಬಾಯಿ ಮುಚ್ಚುವುದಿಲ್ಲ ಎಂದು ರಮೇಶ್ ಹೇಳಿದರು.

ನಾಯಕರ ಕಳವಳವನ್ನು ಶಮನಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ. "ಆದರೆ ಕೆಲವರು ಅದನ್ನು ಬಿಟ್ಟು, ನಿಂದನೆ ಮಾಡುತ್ತಾರೆ "ನಾನು ಅವರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ, ನಾನು ಈಗಾಗಲೇ ಅವರ ಬಗ್ಗೆ ಮಾತನಾಡಿದ್ದೇನೆ ಎಂದು ಅವರು ಆಜಾದ್ ಅವರನ್ನು ಉಲ್ಲೇಖಿಸಿ ಹೇಳಿದರು. ಆದರೆ 'ಕಾಂಗ್ರೆಸ್ ಜೋಡೋ' ನಮ್ಮ ಆದ್ಯತೆ ಎಂದು ಹೇಳುವುದು ತಪ್ಪು, ನಮಗೆ ದೇಶ ಒಗ್ಗೂಡಿಸುವುದು ಆದ್ಯತೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು. 

SCROLL FOR NEXT