ದೇಶ

'ಸ್ನೇಹದಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ': ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

Sumana Upadhyaya

ನವದೆಹಲಿ: ಸ್ನೇಹದಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಹೇಳಿದ ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ, ಭಾರತ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ಎರಡೂ ದೇಶಗಳಲ್ಲಿನ ಜನರ ಸ್ಥಿತಿಯನ್ನು ಸುಧಾರಿಸುವುದು, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಿದರು.

ನಾಲ್ಕು ದಿನಗಳ ಭಾರತ ಪ್ರವಾಸಕ್ಕೆ ಇಂದು ದೆಹಲಿಗೆ ಆಗಮಿಸಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅದ್ದೂರಿ ಸಾಂಪ್ರದಾಯಿತ ಸ್ವಾಗತ ನೀಡಲಾಯಿತು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ ದೇಶದ ಆರ್ಥಿಕತೆಯನ್ನು ಹೆಚ್ಚಿಸಿ ನಮ್ಮ ಜನರ ಮೂಲಭೂತ ಅಗತ್ಯಗಳನ್ನು ಈಡೇರಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಸ್ನೇಹದಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು, ಅದನ್ನು ನಾವು ಎಂದಿಗೂ ಪಾಲಿಸಿಕೊಂಡು ಹೋಗುತ್ತೇವೆ ಎಂದರು.

ನಿನ್ನೆ ಅಪರಾಹ್ನ ಭಾರತಕ್ಕೆ ಆಗಮಿಸಿದ್ದ ಅವರು ಇಂದು ಬೆಳಗ್ಗೆ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಇಂದು ಅಪರಾಹ್ನ ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ನಿನ್ನೆ ಸಂಜೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಾಂಗ್ಲಾ ಪ್ರಧಾನಿಯವರನ್ನು ಭೇಟಿ ಮಾಡಿದ್ದರು. ಅದಾನಿ ಗ್ರೂಪ್ ನ ಗೌತಮ್ ಅದಾನಿ ಸಹ ಭೇಟಿಯಾಗಿದ್ದರು. ನಿನ್ನೆ ದೆಹಲಿಯ ನಿಜಾಮುದ್ದೀನ್ ಔಲಿಯಾ ದರ್ಗಾಕ್ಕೆ ಹಸೀನಾ ಭೇಟಿ ನೀಡಿದ್ದರು. 

ಭಾರತ ಭೇಟಿ ಸಮಯದಲ್ಲಿ, ಪ್ರಧಾನಿ ಹಸೀನಾ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು  ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಲಿದ್ದಾರೆ. ಗುರುವಾರ ಅಜ್ಮರ್‌ ಷರೀಫ್‌ಗೆ ಪ್ರಯಾಣಿಸಲಿದ್ದಾರೆ.

ಬಾಂಗ್ಲಾದೇಶ ಈಗ ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ದ್ವಿಪಕ್ಷೀಯ ವ್ಯಾಪಾರವು ಕಳೆದ ಐದು ವರ್ಷಗಳಲ್ಲಿ 9 ಶತಕೋಟಿ ಡಾಲರ್ ನಿಂದ 18 ಶತಕೋಟಿ ಡಾಲರ್ ಗೆ ಬೆಳೆದಿದೆ. 2020-21 ರಲ್ಲಿ 9.69 ಶತಕೋಟಿ ಡಾಲರ್ ನಿಂದ 2021-22 ರಲ್ಲಿ 16.15 ಶತಕೋಟಿ ಡಾಲರ್ ಗೆ, ರಫ್ತುಗಳು ಶೇಕಡಾ 66ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ಇದು ಭಾರತಕ್ಕೆ ನಾಲ್ಕನೇ ಅತಿದೊಡ್ಡ ರಫ್ತು ದೇಶವಾಗಿದೆ.

SCROLL FOR NEXT