ಮುಂಬೈ: ಕೊರೋನಾ ಲಸಿಕೆ ತಯಾರಿಕಾ ಕಂಪನಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ್ ಪೂನವಾಲ್ಲಾ ಹೆಸರಿನಲ್ಲಿ ಹಣ ವರ್ಗಾವಣೆ ಮಾಡುವ ಸಂದೇಶ ಕಳುಹಿಸುವ ಮೂಲಕ ವಂಚಕರು 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ಪುಣೆ ಪೊಲೀಸರು ಶನಿವಾರ ತಿಳಿಸಿದ್ದಾರೆ. ಬುಧವಾರ ಮತ್ತು ಗುರುವಾರ ಮಧ್ಯಾಹ್ನದ ನಡುವೆ ವಂಚನೆ ಬಯಲಾಗಿದೆ ಎಂದು ಬಂಡ್ಗಾರ್ಡನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್ಪೆಕ್ಟರ್ ಪ್ರತಾಪ್ ಮಾನ್ಕರ್ ತಿಳಿಸಿದ್ದಾರೆ. ಎಫ್ಐಆರ್ ಪ್ರಕಾರ, ಸೆರಂ ಇನ್ಸ್ಟಿಟ್ಯೂಟ್ ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆ ಅವರು ಅದಾರ ಪೂನಾವಲ್ಲ ಎಂದು ಬಿಂಬಿಸಿಕೊಂಡ ವ್ಯಕ್ತಿಯಿಂದ ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಿದ್ದು, ಕೂಡಲೇ ಕೆಲವು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ ಎಂದು ಸಂಸ್ಥೆಯ ಹಣಕಾಸು ವ್ಯವಸ್ಥಾಪಕರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಮೆಸೇಜ್ ಮಾಡಿದ್ದು ಸಿಇಒ ಎಂದು ನಂಬಿದ ಕಂಪನಿ ಅಧಿಕಾರಿಗಳು ಆನ್ಲೈನ್ನಲ್ಲಿ 1,01,01,554 ರೂ.ಗಳನ್ನು ವರ್ಗಾಯಿಸಿದ್ದಾರೆ, ಪೂನಾವಾಲಾ ಅಂತಹ ಯಾವುದೇ ವಾಟ್ಸಾಪ್ ಸಂವಹನವನ್ನು ಕಳುಹಿಸಿಲ್ಲ ಎಂಬುದನ್ನು ನಂತರ ತಿಳಿದಿದ್ದಾರೆ.
ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಇನ್ಸ್ಪೆಕ್ಟರ್ ಮಾನ್ಕರ್ ತಿಳಿಸಿದ್ದಾರೆ. ಪುಣೆ ಬಳಿ ಘಟಕ ಹೊಂದಿರುವ ಸೆರಂ ಇನ್ಸ್ಟಿಟ್ಯೂಟ್ ಇತರ ಲಸಿಕೆಗಳ ನಡುವೆ ಕೊರೊನಾವೈರಸ್ ವಿರುದ್ಧದ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತದೆ.