ದೇಶ

ದ್ವೇಷದ ಭಾಷಣಕ್ಕಾಗಿ ಪಕ್ಷಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ, ಕಾನೂನಿನಡಿ ಅದಕ್ಕೆ ವ್ಯಾಖ್ಯಾನವಿಲ್ಲ: ಚುನಾವಣಾ ಆಯೋಗ

Sumana Upadhyaya

ನವದೆಹಲಿ: ದ್ವೇಷ ಭಾಷಣ ಕಾರಣಕ್ಕೆ ಅಭ್ಯರ್ಥಿಗಳ ನೋಂದಣಿ ಅಥವಾ ರಾಜಕೀಯ ಪಕ್ಷಗಳ ಗುರುತು ರದ್ದುಗೊಳಿಸುವ ಕಾನೂನುಬದ್ಧ ಅಧಿಕಾರ ಇಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗೆ ಹೇಳಿದೆ. 

ಭಾರತದಲ್ಲಿರುವ ಕಾನೂನಿನಡಿಯಲ್ಲಿ ದ್ವೇಷದ ಭಾಷಣ ಕುರಿತು ವ್ಯಾಖ್ಯಾನ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಹೇಳಿದೆ. ಚುನಾವಣೆ ಸಂದರ್ಭದಲ್ಲಿ ಕಂಡುಬರುವ ರಾಜಕಾರಣಿಗಳ, ರಾಜಕೀಯ ಪಕ್ಷಗಳ ದ್ವೇಷದ ಭಾಷಣ ಮತ್ತು ವದಂತಿ ಹರಡುವಿಕೆಯನ್ನು ತಡೆಗಟ್ಟಲು ಯಾವುದೇ ಕಾನೂನುಗಳಿಲ್ಲದಿರುವುದರಿಂದ ಚುನಾವಣಾ ಆಯೋಗ ಭಾರತೀಯ ದಂಡ ಸಂಹಿತೆ ಮತ್ತು ಆರ್ ಪಿ ಕಾಯ್ದೆ 1951ರಡಿಯಲ್ಲಿ ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಯಾವುದೇ ಹೇಳಿಕೆಗಳು, ಮಾತುಗಳನ್ನು ಆಡಬಾರದು ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಸೂಚಿಸುತ್ತದೆ ಎಂದು ಅಫಿಡವಿಟ್ಟಿನಲ್ಲಿ ವಿವರಿಸಲಾಗಿದೆ. 

ದ್ವೇಷದ ಭಾಷಣಕ್ಕೆ ಕಡಿವಾಣ ಹಾಕಬೇಕೆಂದು ಬಿಜೆಪಿ ನಾಯಕ ಅಶ್ವಿನ್ ಕುಮಾರ್ ಸಲ್ಲಿಸಿದ್ದ ಮನವಿಗೆ ಪ್ರತಿಯಾಗಿ ಚುನಾವಣಾ ಆಯೋಗ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಈ ರೀತಿ ಹೇಳಲಾಗಿದೆ. ಚುನಾವಣಾ ಆಯೋಗದ ಅಫಿಡವಿಟ್, ಪ್ರವಾಸಿ ಭಿಲಾಯಿ ಸಂಘಟನೆ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2014) ಪ್ರಕರಣದಲ್ಲಿ, ರಾಜಕೀಯ ಪಕ್ಷವನ್ನು ಮರು-ಗುರುತಿಸುವುದಕ್ಕೆ ಅಥವಾ ದ್ವೇಷದ ಭಾಷಣಕ್ಕಾಗಿ ಅದರ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರವನ್ನು ಕಾನೂನು ಆಯೋಗಕ್ಕೆ ನೀಡಬೇಕೆ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ದ್ವೇಷದ ಭಾಷಣವನ್ನು ವ್ಯಾಖ್ಯಾನಿಸಲು ಮತ್ತು ಬೆದರಿಕೆಯನ್ನು ತಡೆಯಲು ಸಂಸತ್ತಿಗೆ ಶಿಫಾರಸುಗಳನ್ನು ಮಾಡಲು ಕಾನೂನು ಆಯೋಗವನ್ನು ಸುಪ್ರೀಂ ಕೋರ್ಟ್ ಕೇಳಿದೆ. ಆದರೆ ಆಯೋಗದ 267 ನೇ ವರದಿಯು ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಲಿಲ್ಲ ಎಂದು ಅಫಿಡವಿಟ್ ನಲ್ಲಿ ಚುನಾವಣಾ ಆಯೋಗ ಗಮನಸೆಳೆದಿದೆ.

ಚುನಾವಣಾ ನೀತಿ ಸಂಹಿತೆಗೆ ತಿದ್ದುಪಡಿ ತರಲಾಗಿದ್ದು ಅಭ್ಯರ್ಥಿ ಅಥವಾ ಅವರಿಗೆ ಸಂಬಂಧಪಟ್ಟವರು ದ್ವೇಷದ ಭಾಷಣ ಮಾಡಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶೋಕಾಸ್ ನೊಟೀಸ್ ನೀಡಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಚುನಾವಣಾ ಆಯೋಗದ ನಿಯಮಗಳು, ತಿದ್ದುಪಡಿಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದ್ದು ಈ ಮೂಲಕ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ತಲುಪಬೇಕೆಂಬುದು ಉದ್ದೇಶವಾಗಿದೆ ಎಂದು ಅಫಿಡವಿಟ್ಟಿನಲ್ಲಿ ಹೇಳಲಾಗಿದೆ.

SCROLL FOR NEXT