ನವದೆಹಲಿ: ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಅನಗತ್ಯವಾಗಿ ಎಲ್ಲರಿಗೂ ತೊಂದರೆ ನೀಡುತ್ತಿವೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ರೀತಿಯಿಂದ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೆಫ್ಟಿನೆಂಟ್ ಗವರ್ನರ್, ಸಿಬಿಐ ಮತ್ತು ಬಿಜೆಪಿ ಆಪಾದಿತ ಅಬಕಾರಿ ಹಗರಣದಲ್ಲಿ ವಿವಿಧ ಪ್ರಮಾಣದ ಹಣವನ್ನು ಉಲ್ಲೇಖಿಸಿವೆ. ಆದರೆ, ಅಬಕಾರಿ ಹಗರಣ ಎಂದರೆ ಏನೆಂಬುದು ನಿಜವಾಗಿಯೂ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪಗಳ ಬಗ್ಗೆ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ದೇಶಾದ್ಯಂತ ಸುಮಾರು 40 ಸ್ಥಳಗಳಲ್ಲಿ ಹೊಸದಾಗಿ ದಾಳಿ ನಡೆಸಿದೆ.
'ಅವರ (ಬಿಜೆಪಿ) ನಾಯಕರೊಬ್ಬರು 8,000 ಕೋಟಿ ರೂಪಾಯಿ ಹಗರಣ ಎಂದು ಹೇಳುತ್ತಾರೆ, ಎಲ್ಜಿ 144 ಕೋಟಿ ರೂಪಾಯಿ ಹಗರಣ ಎಂದು ಹೇಳುತ್ತಾರೆ ಮತ್ತು ಸಿಬಿಐ ಎಫ್ಐಆರ್ನಲ್ಲಿ 1 ಕೋಟಿ ರೂಪಾಯಿ ಹಗರಣವಿದೆ ಎಂದು ಹೇಳುತ್ತದೆ. ಅಬಕಾರಿ ಹಗರಣ ಏನೆಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ರೀತಿ ಮುಂದುವರಿದರೆ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಅವರು ಅನಗತ್ಯವಾಗಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.